
ಮಂಗಳೂರು : ‘ಸೌಜನ್ಯ ಹೆಲ್ಪ್ ಲೈನ್’ ಹೆಸರಿನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬುವವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನ ಮಾಲಾಡಿ ನಿವಾಸಿ ಗಾಯಕರಾದ ಕೆ.ರಾಜೇಶ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಫೇಸ್ಬುಕ್ ಮೂಲಕ ಪರಿಚಯವಾದ ಸಂಧ್ಯಾ ಅವರ ಮೇಲೆ ನಂಬಿಕೆ ಇಟ್ಟು, ಹಂತ ಹಂತವಾಗಿ 3.20 ಲಕ್ಷ ರೂಪಾಯಿ ನೀಡಿದ್ದಾರೆ. ಈ ಹಣವನ್ನು ಹೈಕೋರ್ಟ್ನಲ್ಲಿ ಪ್ರಕರಣ ಬಗೆಹರಿಸಲು ಬೇಕೆಂದು ಸಂಧ್ಯಾ ಮನವೊಲಿಸಿದ್ದಳು ಎನ್ನಲಾಗಿದೆ.
ಆದರೆ, ಯಾವುದೇ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ರಾಜೇಶ್ ಅವರು ಸಂಧ್ಯಾಗೆ ಪ್ರಶ್ನಿಸಿದಾಗ, ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದಳು. ಕೊನೆಗೆ ಕೋರ್ಟ್ ದಾಖಲೆ ಕೇಳಿದಾಗ ಬೆದರಿಕೆ ಹಾಕಿ “ಕೈಕಾಲು ಮುರಿಸ್ತೀನಿ” ಎಂದು ಬೆದರಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ರಾಜೇಶ್ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, IPC ಸೆಕ್ಷನ್ 318(4) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆ.