
ಗೋವಾ, ಪಣಜಿ: 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ ಅಧ್ಯಾಯ 1’ ಚಿತ್ರದ ದೈವಾರಾಧನೆಯ ದೃಶ್ಯವನ್ನು ಅಣಕಿಸಿ, ದೈವವನ್ನು ‘ಸ್ತ್ರೀ ಪ್ರೇತ’ (Female Ghost) ಎಂದು ಸಂಬೋಧಿಸಿರುವ ಘಟನೆ ಕರಾವಳಿಯ ಆರಾಧಕರ ಮತ್ತು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ (ನವೆಂಬರ್ 28) ಗೋವಾದಲ್ಲಿ ನಡೆದ ಸಮಾರಂಭದಲ್ಲಿ, ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ರಣವೀರ್ ಸಿಂಗ್ ಅವರು ‘ಕಾಂತಾರ ಅಧ್ಯಾಯ 1’ ಚಿತ್ರದಲ್ಲಿ ರಿಷಬ್ ಅವರ ನಟನೆಯನ್ನು ಶ್ಲಾಘಿಸಿದರು. ಮೆಚ್ಚುಗೆ ವ್ಯಕ್ತಪಡಿಸುವ ಭರದಲ್ಲಿ, ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ದೈವ ಪಾತ್ರವು ಮೈಮೇಲೆ ಬರುವ ದೃಶ್ಯವನ್ನು ಅನುಕರಿಸಲು ಹೋಗಿ, “ರಿಷಬ್ ಅವರ ಅಭಿನಯ ಅದ್ಭುತ. ಅದರಲ್ಲೂ ಸ್ತ್ರೀ ಪ್ರೇತ (ಚಾಮುಂಡಿ ದೈವ) ನಿಮ್ಮ ದೇಹವನ್ನು ಪ್ರವೇಶಿಸಿದಾಗ ಆ ಶಾಟ್ ಅದ್ಭುತವಾಗಿತ್ತು” ಎಂದು ಹೇಳಿ, ದೈವದ ಅಭಿನಯವನ್ನು ಮಾಡಿ ತೋರಿಸಿದ್ದಾರೆ.
ದೈವಕ್ಕೆ ಅಗೌರವ: ಕರಾವಳಿ ಜನರ ಕೆಂಗಣ್ಣು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದಿಯಾಗಿ ಕರಾವಳಿ ಕರ್ನಾಟಕದಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ನಂಬಿಕೆಯ ಆಧಾರವಾಗಿರುವ ‘ದೈವ’ಕ್ಕೆ, ರಣವೀರ್ ಸಿಂಗ್ ಅವರು ನೀಡಿದ ಈ ಅಸಡ್ಡೆಯ ಉಲ್ಲೇಖವು ಲಕ್ಷಾಂತರ ದೈವಾರಾಧಕರ ಭಾವನೆಗಳಿಗೆ ಧಕ್ಕೆ ತಂದಿದೆ. ದೈವವನ್ನು ದೆವ್ವ ಅಥವಾ ಪ್ರೇತ ಎಂದು ಕರೆಯುವುದು ಈ ಆರಾಧನಾ ಸಂಪ್ರದಾಯಕ್ಕೆ ಮಾಡಿದ ಬಹುದೊಡ್ಡ ಅಪಮಾನ ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.
“ಒಂದು ಸಂಸ್ಕೃತಿ ಮತ್ತು ನಂಬಿಕೆಯನ್ನು ಪ್ರತಿನಿಧಿಸುವ ದೈವವನ್ನು ‘ಸ್ತ್ರೀ ದೆವ್ವ’ ಎಂದು ಕರೆಯುವುದು ನಟರ ಮೂಲಭೂತ ತಿಳುವಳಿಕೆಯ ಕೊರತೆ ತೋರಿಸುತ್ತದೆ. ಇಂತಹ ಹೇಳಿಕೆಗಳು ಕರಾವಳಿಯ ಜನರಿಗೆ ಅತ್ಯಂತ ಅಗೌರವಕರ” ಎಂದು ನೆಟ್ಟಿಗರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಷಬ್ ಶೆಟ್ಟಿ ನಡೆ ಮೇಲೂ ಟೀಕೆ
ರಣವೀರ್ ಸಿಂಗ್ ಅವರು ಈ ಹೇಳಿಕೆಯನ್ನು ನೀಡುವಾಗ, ರಿಷಬ್ ಶೆಟ್ಟಿ ಅವರು ವೇದಿಕೆಯ ಕೆಳಗೆ ಸಭೆಯಲ್ಲಿ ಕುಳಿತು ನಗುತ್ತಿದ್ದರು. ಈ ಬಗ್ಗೆಯೂ ಜನರಿಂದ ಟೀಕೆ ವ್ಯಕ್ತವಾಗಿದೆ. ಕರಾವಳಿ ಸಂಸ್ಕೃತಿಯನ್ನು ಜಾಗತಿಕ ವೇದಿಕೆಗೆ ಪರಿಚಯಿಸಿದ ರಿಷಬ್ ಶೆಟ್ಟಿ ಅವರು, ತಮ್ಮ ನಂಬಿಕೆಯ ಭಾಗವಾದ ದೈವವನ್ನು ಅಗೌರವದಿಂದ ಸಂಬೋಧಿಸಿದಾಗ ಅದನ್ನು ತಕ್ಷಣವೇ ಆಕ್ಷೇಪಿಸಬೇಕಿತ್ತು, ಆದರೆ ನಕ್ಕಿರುವುದು ಸರಿಯಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



































