
ಮಂಗಳೂರು: ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ‘ಕಾಂತಾರ ಚಾಪ್ಟರ್ 1’ (Kantara Chapter 1) ಚಿತ್ರದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ, ನಾಯಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ (Hombale Films) ಸಂಸ್ಥೆಯು ಮಂಗಳೂರಿನ ದೈವಸ್ಥಾನವೊಂದರಲ್ಲಿ ಹರಕೆಯ ನೇಮೋತ್ಸವ ಸೇವೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದ್ದಾರೆ.
ತಮ್ಮ ಪತ್ನಿ, ತಾಯಿ ಮತ್ತು ಮಕ್ಕಳೊಂದಿಗೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ ನಟ ರಿಷಬ್ ಶೆಟ್ಟಿ, ದೈವದ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ‘ಕಾಂತಾರ’ ಚಿತ್ರತಂಡದ ಹಲವು ಪ್ರಮುಖ ನಟರು ಉಪಸ್ಥಿತರಿದ್ದರು.
ಸಮರ್ಪಣೆಯ ಭಾಗವಾಗಿ, ಚಿತ್ರತಂಡವು ಗಗ್ಗರ ಸೇವೆಯನ್ನು ನೆರವೇರಿಸಿತು ಮತ್ತು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿ, ಸಾರ್ವಜನಿಕ ಸೇವಾ ಕೈಂಕರ್ಯದಲ್ಲಿ ಭಾಗಿಯಾಯಿತು. ಈ ಹರಕೆಯ ನೇಮೋತ್ಸವವು, ಚಿತ್ರದ ಯಶಸ್ಸಿಗೆ ದೈವದ ಅನುಗ್ರಹವೇ ಕಾರಣ ಎಂಬ ಚಿತ್ರತಂಡದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ವಿಶೇಷವೆಂದರೆ, ಕಳೆದ ಏಪ್ರಿಲ್ ತಿಂಗಳಿನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿಯವರು ಭಾಗವಹಿಸಿದ್ದರು. ಅಂದಿನ ನೇಮೋತ್ಸವದ ವೇಳೆ, ದೈವವು ರಿಷಬ್ ಶೆಟ್ಟಿಗೆ ಭವಿಷ್ಯದ ಕುರಿತು ಕೆಲವು ಎಚ್ಚರಿಕೆ ಮತ್ತು ಮಾರ್ಗದರ್ಶನಗಳನ್ನು ನೀಡಿತ್ತು ಎಂಬುದು ಗಮನಾರ್ಹ. ದೈವದ ಆಶೀರ್ವಾದ ಮತ್ತು ಎಚ್ಚರಿಕೆಯ ನಂತರವೇ ‘ಕಾಂತಾರ’ದಂತಹ ವಿಶ್ವಮಟ್ಟದ ಯಶಸ್ವಿ ಚಿತ್ರವು ಮೂಡಿ ಬಂದಿರುವುದು ವಿಶೇಷ ಸನ್ನಿವೇಶವಾಗಿದೆ. ತಮ್ಮ ಸಿನಿಮಾ ಮೂಲಕ ಕರಾವಳಿಯ ಸಂಸ್ಕೃತಿ ಮತ್ತು ದೈವಾರಾಧನೆಯನ್ನು ಜಗತ್ತಿಗೆ ಪರಿಚಯಿಸಿದ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ತಂಡವು, ತಮ್ಮ ಯಶಸ್ಸಿನ ಮೂಲವಾದ ದೈವಕ್ಕೆ ಈ ಮೂಲಕ ಕೃತಜ್ಞತೆ ಸಲ್ಲಿಸಿದೆ.



































