
ಭಾರತೀಯ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಗಳು ದಟ್ಟವಾಗಿವೆ. ಮುಂಬೈ ಮೂಲದ ವರದಿಗಳ ಪ್ರಕಾರ, ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಂಭವವಿದ್ದು, ಅವರ ಸ್ಥಾನಕ್ಕೆ ಹೊಸ ನಾಯಕನ ನೇಮಕ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಹೇಳಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗಾಗಲೇ ಟೆಸ್ಟ್ ತಂಡದ ನಾಯಕತ್ವವನ್ನು ಶುಭಮನ್ ಗಿಲ್ ಅವರಿಗೆ ಹಾಗೂ ಟಿ20 ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ಅವರಿಗೆ ಹಸ್ತಾಂತರಿಸಿದೆ. ರೋಹಿತ್ ಶರ್ಮಾ ಪ್ರಸ್ತುತ ಏಕದಿನ ತಂಡದ ನಾಯಕರಾಗಿದ್ದು, ಈ ಸ್ಥಾನದಲ್ಲೂ ಬದಲಾವಣೆಗೆ ಬಿಸಿಸಿಐ ಚಿಂತನೆ ನಡೆಸಿದೆ.
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯು ರೋಹಿತ್ ಶರ್ಮಾ ಅವರ ನಾಯಕತ್ವದ ಕೊನೆಯ ಸರಣಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. 2027ರ ಏಕದಿನ ವಿಶ್ವಕಪ್ ಅನ್ನು ಗುರಿಯಾಗಿಟ್ಟುಕೊಂಡು, ಯುವ ನಾಯಕನನ್ನು ರೂಪಿಸಲು ಬಿಸಿಸಿಐ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
‘ರೆವ್ಸ್ಪೋರ್ಟ್ಜ್’ ವರದಿಯ ಪ್ರಕಾರ, ಶುಭಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್ನಲ್ಲಿ ಆಡುವುದನ್ನು ಮುಂದುವರಿಸಲು ಆಸಕ್ತಿ ಹೊಂದಿದ್ದರೂ, ನಾಯಕತ್ವದ ನಿರ್ಧಾರವು ಬಿಸಿಸಿಐ ಕೈಯಲ್ಲಿದೆ.
ಭವಿಷ್ಯದಲ್ಲಿ ಮೂರು ಮಾದರಿಗಳಿಗೂ ಒಬ್ಬನೇ ನಾಯಕನನ್ನು ಹೊಂದುವ ಉದ್ದೇಶ ಬಿಸಿಸಿಐಗಿದೆ. 2026ರ T20 ವಿಶ್ವಕಪ್ ನಂತರ ಸೂರ್ಯಕುಮಾರ್ ಬದಲಿಗೆ ಶುಭಮನ್ ಗಿಲ್ ಅವರೇ T20 ತಂಡದ ನಾಯಕರೂ ಆಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸಿವೆ.
ಇನ್ನು, T20 ಮತ್ತು ಟೆಸ್ಟ್ ತಂಡದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಸರಣಿಗೂ ಮುನ್ನ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧದ ಭಾರತ ‘ಎ’ ಸರಣಿಯಲ್ಲಿ ಇಬ್ಬರೂ ಆಟಗಾರರು ಆಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳು ಭಾರತೀಯ ಕ್ರಿಕೆಟ್ನ ಮುಂದಿನ ಹಾದಿಯ ಬಗ್ಗೆ ಕುತೂಹಲ ಮೂಡಿಸಿವೆ.