
ಹೆಬ್ರಿ:”ಕ್ರೀಡೆಗಳು ಕೇವಲ ಮನೋರಂಜನೆಗಾಗಿ ಅಷ್ಟೇ ಅಲ್ಲ, ಜೀವನದ ಪಾಠಗಳನ್ನು ಕಲಿಸುವ ಶಕ್ತಿಗಳು. ಅದರಲ್ಲೂ ವಿದ್ಯಾರ್ಥಿಗಳಿಗೆ ಕ್ರೀಡೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ನಾಯಕತ್ವ ಗುಣ, ಸಮಯ ಪಾಲನೆ, ಸಾಂಘಿಕ ಹೋರಾಟದ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಶಾರೀರಿಕ ಬೆಳವಣಿಗೆಗೆ ಆಟ ಎಷ್ಟು ಸಹಕಾರಿಯೋ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕೂಡ ಅಷ್ಟೇ ಸಹಕಾರಿ. ಸೋಲು – ಗೆಲುವು ಒಂದೊಂದು ಪಾಠ” ಎಂದು ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ (ರಿ.) ನ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು. ಅವರು ಮುದ್ರಾಡಿಯ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರದ ಅಂಗವಾಗಿ ನಡೆದ ವಿದ್ಯಾರ್ಥಿಗಳ ಮತ್ತು ಪೋಷಕರ ಕ್ರೀಡಾಕೂಟದಲ್ಲಿ ಅಧ್ಯಕ್ಷತೆ ವಹಿಸಿ, ಕ್ರೀಡಾ ಜ್ಯೋತಿ ಬೆಳಗಿ ಮಾತಾಡಿದರು.
ಮುದ್ರಾಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ರಮ್ಯಕಾಂತಿಯವರು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ “ಪಾಠ – ಪುಸ್ತಕಗಳು ಮಾತ್ರ ವಿದ್ಯಾರ್ಥಿಗಳ ಜ್ಞಾನ ಬೆಳಗುವುದಿಲ್ಲ, ಪಠ್ಯೇತರ ಚಟುವಟಿಕೆಗಳು ಕೂಡ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣ ಮಾಡುತ್ತವೆ. ಕ್ರೀಡೆಗಳು ಮನಸ್ಸನ್ನು ಪ್ರಫುಲ್ಲಗೊಳಿಸುವ ಸಾಧನ. ಆಟದಲ್ಲಿ ತೊಡಗಿದರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಅದರಲ್ಲೇ ತೊಡಗಿ ಓದಿನಲ್ಲಿ ನಿರಾಸಕ್ತಿ ತಾಳಬೇಡಿ. ಇಂದಿನ ದಿನಗಳಲ್ಲಿ ಆಟ – ಪಾಠಗಳಲ್ಲಿ ಪಾಠಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಆಟೋಟಗಳು ಮನಸ್ಸನ್ನು ಏಕಾಗ್ರತೆಯಲ್ಲಿರಿಸಲು ಸಹಕಾರಿ. ನಮ್ಮ ಊರು, ತಾಲೂಕುಗಳಲ್ಲಿಯೇ ರಾಜ್ಯ – ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿದ್ದಾರೆ. ಅವರ ಸಾಧನೆಗಳು ನಿಮಗೆ ಪ್ರೇರಣೆಯಾಗಲಿ” ಎಂದರು.
ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಮಿತಿಯ ಅಧ್ಯಕ್ಷೆ ಪ್ರತಿಮಾ, ನೂತನವಾಗಿ ರಚನೆಗೊಂಡ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಸಾಂತ್ರಪಲ್ಕೆ, ಪಂಚಾಯತ್ ಸದಸ್ಯರಾದ ಶಾಂತ ದಿನೇಶ್ ಪೂಜಾರಿ, ಸನತ್ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಬಲ್ಲಾಡಿ ಚಂದ್ರಶೇಖರ್ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಹಿರಿಯ ಶಿಕ್ಷಕ ಮಹೇಶ್ ನಾಯ್ಕ ಕೆ. ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಘುಪತಿ ಹೆಬ್ಬಾರ್ ವಂದಿಸಿದರು. ವಿದ್ಯಾರ್ಥಿಗಳು, ಪೋಷಕರು, ರಕ್ಷಕ ಶಿಕ್ಷಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಪದಕ ಪ್ರಧಾನ ಮಾಡಲಾಯಿತು.ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮುದ್ರಾಡಿ ಪಂಚಾಯತ್ ಸದಸ್ಯರಾದ ಶಾಂತ ದಿನೇಶ್ ಪೂಜಾರಿ, ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷೆ ಪ್ರತಿಮಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಮಾತನಾಡಿದರು.ಕ್ರೀಡಾಕೂಟದ ಪ್ರಾಯೋಜಕತ್ವ ವಹಿಸಿದ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದಿಯಾಗಿ ಸರ್ವ ಸದಸ್ಯರನ್ನು ಗೌರವಿಸಲಾಯಿತು. ಶಿಕ್ಷಕರಾದ ಆನಂದ್ ಪಿ.ವಿ. ನಿರೂಪಿಸಿ, ಮಹೇಶ್ ನಾಯ್ಕ ಕೆ. ವಂದಿಸಿದರು. ಶಿಕ್ಷಕರಾದ ಶ್ಯಾಮಲಾ, ರಘುಪತಿ ಹೆಬ್ಬಾರ್ ಮತ್ತು ಚಂದ್ರಕಾಂತಿ ಹೆಗ್ಡೆ ಸಹಕರಿಸಿದರು.



































