
ಮಂಗಳೂರು : ನಗರದ ಜಪ್ಪಿನಮೊಗರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರ ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಮದ್ಯಪಾನ ಹಾಗೂ ಅತೀವೇಗದ ಚಾಲನೆಯೇ ನೇರ ಕಾರಣವಾಗಿದೆ ಎಂಬುದನ್ನು ಮಂಗಳೂರು ನಗರ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ.
ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ಅಮೀನ್ ಪೂಜಾರಿ ಪುತ್ರ ಓಂಶ್ರೀ ಪೂಜಾರಿ ಹಾಗೂ ಸ್ಟುಡಿಯೋ ಮಾಲಕ ದೀಪಕ್ ರಾವ್ ಪುತ್ರ ಅಮನ್ ರಾವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಆಶಿಶ್ ಮತ್ತು ವಿದೇಶಿ ಯುವಕ ಜೆರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಂಜಿನ್ ಭಾಗವೇ ಮುರಿದು ಹೊರ ಬಿದ್ದಿದೆ. ಕಾರಿನ ಏರ್ಬ್ಯಾಗ್ಗಳು ಹರಿದಿದ್ದು, ಪರಿಣಾಮದ ಭೀಕರತೆಯು ಜನರನ್ನು ಬೆಚ್ಚಿಬೀಳಿಸುವಂತಿತ್ತು.
ಪೊಲೀಸರ ಪ್ರಕಾರ, ಚಾಲಕ ಅಮನ್ ರಾವ್ ಮದ್ಯ ಸೇವಿಸಿ, ತನ್ನ ತಂದೆಯ ಹೊಸ ಫೋಕ್ಸ್ವ್ಯಾಗನ್ ವರ್ಟಸ್ ಕಾರನ್ನು ಅತೀವೇಗದಲ್ಲಿ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಗುದ್ದಿದ ಪರಿಣಾಮ ಈ ದುರಂತ ಸಂಭವಿಸಿದೆ.
ಈ ಸಂಬಂಧ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ಗಳು 281, 125(A), 125(B), 106(1)B ಹಾಗೂ ಮೋಟಾರು ವಾಹನ ಕಾಯಿದೆಯ 185 ಮತ್ತು 183ರಂತೆ ಕಠಿಣ ಪ್ರಕರಣ ದಾಖಲಾಗಿದೆ.

ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಈ ಕುರಿತು ಖಡಕ್ ಎಚ್ಚರಿಕೆ ನೀಡಿ, ಸಾರ್ವಜನಿಕರು ಮದ್ಯಪಾನಿಸಿ ಅಥವಾ ಅತಿವೇಗದಲ್ಲಿ ವಾಹನ ಚಲಾಯಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಈ ಕೆಳಗಿನ ಪ್ರಕಟಣೆ ಹೊರಡಿಸಿದ್ದಾರೆ.
ಮದ್ಯ ಸೇವನೆ ಮಾಡಿ ಹಾಗೂ ಅತೀವೇಗದಿಂದ ವಾಹನ ಚಲಾಯಿಸಿದಲ್ಲಿ ರಸ್ತೆ ಅಪಘಾತ ಉಂಟಾಗಿ ಚಾಲಕ, ಪ್ರಯಾಣಿಕರು ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರ ಪರಿಣಾಮ ಕುಟುಂಬ ಮತ್ತು ಅವಲಂಭಿತರ ಮೇಲೆ ಪ್ರಭಾವ ಬಿದ್ದು ದುಃಖ ಅನುಭವಿಸುತ್ತಾರೆ.
1.ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟಾರು ವಾಹನ ಕಾಯಿದೆ ಕಲಂ 185 ಅನ್ವಯ ಪ್ರಕರಣ ದಾಖಲಿಸಿ ರೂ 10,000/- ವರೆಗೆ ದಂಡ ಪಾವತಿಸಬೇಕಾಗುತ್ತದೆ.
2.ಅತೀವೇಗದಿಂದ (Over Speed) ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟಾರು ವಾಹನ ಕಾಯಿದೆ ಕಲಂ 183 ಅನ್ವಯ ಪ್ರಕರಣ ದಾಖಲಿಸಿ 2/3/LMV ವಾಹನಗಳಿಗೆ ರೂ 1,000 , HMV HGV OTHERS ವಾಹನಗಳಿಗೆ 2,000 ವರೆಗೆ ದಂಡ ಪಾವತಿಸಬೇಕಾಗುತ್ತದೆ