
ಉಡುಪಿ: ಇಂದ್ರಾಳಿ ರೈಲು ನಿಲ್ದಾಣದ ಹೊರವಲಯದ ಪಾದಚಾರಿ ಮಾರ್ಗದಲ್ಲಿ ಮಂಗಳವಾರ ನಸುಕಿನ ಜಾವ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಒಬ್ಬ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಸ್ಥಳೀಯ ಆಟೋ ಚಾಲಕರು ರಕ್ಷಿಸಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕ ಅರೆಬೆತ್ತಲೆ ಸ್ಥಿತಿಯಲ್ಲಿ, ಸೊಂಟದ ಪಟ್ಟಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದುದು ಕಂಡುಬಂದಿದೆ. ಸಾರ್ವಜನಿಕರು ತಕ್ಷಣ ಅವನ ಪ್ರಾಣ ಉಳಿಸಿದ್ದಾರೆ. ಯುವಕನ ಬಾಯಿ ಮತ್ತು ಮೂಗಿನಿಂದ ರಕ್ತ ಸ್ರವಿಸುತ್ತಿದ್ದುದು ಗಮನಕ್ಕೆ ಬಂದಿದ್ದು ,ಆತನು ಮಾದಕದ್ರವ್ಯಗಳನ್ನು ಸೇವಿಸಿರಬಹುದೆಂದು ಶಂಕಿಸಲಾಗಿದೆ.
ಯುವಕನು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಆತನ ಗುರುತು ಇನ್ನೂ ತಿಳಿದುಬಂದಿಲ್ಲ. ಆತನ ವಾರಸುದಾರರು ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.