
ವಿಶಾಖಪಟ್ಟಣಂ : 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂನಲ್ಲಿ ಭಾರೀ ಜನಸಂದಣಿ ಮಧ್ಯೆ ಅದ್ಧೂರಿ ಯೋಗ ಕಾರ್ಯಕ್ರಮ ನಡೆದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಮಾರು 3 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಯೋಗಾಭ್ಯಾಸ ನಡೆಸಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ವಿಶಾಖಪಟ್ಟಣಂನ ಆರ್.ಕೆ. ಬೀಚ್ನಿಂದ ಭೋಗಪುರಂವರೆಗೆ ವಿಸ್ತರಿಸಿದ 26 ಕಿಲೋಮೀಟರ್ ಉದ್ದದ ಕಾರಿಡಾರ್ನಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 6:30 ರಿಂದ ಯೋಗ ಕಾರ್ಯಕ್ರಮ ಪ್ರಾರಂಭವಾಗಿದ್ದು, ದೇಶ-ವಿದೇಶಗಳಿಂದ ಬಂದ ಸಾವಿರಾರು ಜನರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಹಲವಾರು ಸಚಿವರು ಹಾಗೂ ಗಣ್ಯರು ಭಾಗವಹಿಸಿದರು. ಪ್ರಧಾನಿ ಮೋದಿ ಮಾತನಾಡುತ್ತಾ,
“ಯೋಗ ಕೇವಲ ವ್ಯಾಯಾಮವಲ್ಲ, ಅದು ಜೀವನದ ಶೈಲಿ. ಯೋಗದಿಂದ ಇಡೀ ವಿಶ್ವ ಒಂದಾಗಿದೆ. ಕೋಟ್ಯಂತರ ಜನರ ಜೀವನಶೈಲಿಗೆ ಯೋಗದಿಂದ ಪರಿವರ್ತನೆ ಬಂದಿದೆ” ಎಂದು ಹೇಳಿದರು.

ಚಂದ್ರಬಾಬು ನಾಯ್ಡು ಮಾತನಾಡುತ್ತಾ, “ಯೋಗವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಮಹತ್ವ ಪ್ರಧಾನಮಂತ್ರಿ ಮೋದಿಯವರಿಗೆ ಸಲ್ಲುತ್ತದೆ” ಎಂದು ಶ್ಲಾಘಿಸಿದರು. ಪವನ್ ಕಲ್ಯಾಣ್ ಕೂಡ ಪ್ರಧಾನಿ ಮೋದಿಯವರು ಯೋಗದ ಜಾಗತಿಕ ವೈಖರಿಯನ್ನು ವಿಶ್ವದ ಗಮನಕ್ಕೆ ತಂದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 25,000ಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು 108 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಪ್ರದರ್ಶನ ನೀಡಿ ಜನರ ಮನಸೆಳೆದರು. ಕಾರ್ಯಕ್ರಮದ ಕೊನೆಯಲ್ಲಿ, ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್ ಕಲ್ಯಾಣ್ ಅವರು ಪ್ರಧಾನಿಯವರಿಗೆ ಸನ್ಮಾನ ಸಲ್ಲಿಸಿದರು.