
ಅಯೋಧ್ಯೆ: ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ರಾಮ ಜನ್ಮಭೂಮಿ ಅಯೋಧ್ಯೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ರವಿವಾರದಂದು ಸರಯೂ ನದಿಯ ಉದ್ದಕ್ಕೂ 26.17 ಲಕ್ಷ ದೀಪಗಳನ್ನು ಏಕಕಾಲಕ್ಕೆ ಹಚ್ಚುವ ಮೂಲಕ ಈ ಬಾರಿಯ ದೀಪೋತ್ಸವವು ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ ಎಂದು ಉತ್ತರಪ್ರದೇಶ ಸರ್ಕಾರ ಘೋಷಿಸಿದೆ.
ಕಳೆದ ವರ್ಷ 25 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಅಯೋಧ್ಯೆ ವಿಶ್ವ ದಾಖಲೆ ಬರೆದಿತ್ತು. ಈ ಬಾರಿ ಆ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಲಾಗಿದೆ.
ದೀಪೋತ್ಸವದ ಭಾಗವಾಗಿ 2,128 ಮಂದಿ ಆರತಿ ನೆರವೇರಿಸಿದರು. ಒಟ್ಟು 26,17,215 ದೀಪಗಳನ್ನು ಬೆಳಗಿಸಲಾಗಿದ್ದು, ಗಿನ್ನೆಸ್ ದಾಖಲೆಯ ಪ್ರತಿನಿಧಿಗಳು ಡ್ರೋನ್ಗಳನ್ನು ಬಳಸಿ ದೀಪಗಳ ಸಂಖ್ಯೆಯನ್ನು ಲೆಕ್ಕಹಾಕಿ ದಾಖಲೆ ಎಂದು ಘೋಷಿಸಿದ್ದಾರೆ ಎಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಉತ್ತರಪ್ರದೇಶದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಜೈವೀರ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಅವರು ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರದಾನ ಮಾಡಿದರು.
ಈ ವೇಳೆ ದೀಪೋತ್ಸವದಲ್ಲಿ ಏಕಕಾಲದಲ್ಲಿ ಅತೀ ಹೆಚ್ಚು ಜನರು ಹಣತೆಗಳನ್ನು ಹಚ್ಚಿ ಪ್ರದರ್ಶಿಸಿರುವುದಕ್ಕಾಗಿ ಮತ್ತೊಂದು ಪ್ರಶಸ್ತಿ ಲಭಿಸಿದ್ದು, ಒಂದೇ ದಿನದಲ್ಲಿ ಅಯೋಧ್ಯೆ ಎರಡು ಸಾಧನೆ ಮಾಡಿದಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, “ಒಂದು ಕಾಲದಲ್ಲಿ ಉತ್ತರ ಪ್ರದೇಶದ ಬಿಕ್ಕಟ್ಟು ಪ್ರದೇಶವಾದ ರಾಮ ಜನ್ಮ ಭೂಮಿಯಲ್ಲಿ ಗುಂಡುಗಳನ್ನು ಹಾರಿಸಲಾಗುತ್ತಿತ್ತು. ಈಗ ನಾವು ದೀಪಗಳನ್ನು ಬೆಳಗಿಸುತ್ತಿದ್ದೇವೆ,” ಎಂದು ಹೇಳಿದರು.



































