
ಮಂಗಳೂರು: ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿ ಮಹಿಳೆ 7.10 ಲಕ್ಷ ರೂ. ಕಳೆದುಕೊಂಡ ಘಟನೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾಂಡೇಶ್ವರ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ದೂರುದಾರೆಗೆ ‘ಡಾ. ತುಷಾರ್ ಪಾಟೀಲ್’ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಮೆಸೇಜ್ ಬಂದಿದ್ದು, ತಾನು ಅಮೆರಿಕದ ಮಿಯಾಮಿ ಫ್ಲೋರಿಡಾದಲ್ಲಿ ನ್ಯೂರೋಸರ್ಜನ್ ಎಂದು ಪರಿಚಯಿಸಿಕೊಂಡಿದ್ದಾನೆ. ಮದುವೆ ಆಗಿ ವಿಚ್ಛೇದನಗೊಂಡಿದ್ದು, ಒಂದು ಮಗುವಿದೆ ಎಂದು ತಿಳಿಸಿದ್ದ.
ಅವನ ಮಾತು ನಂಬಿದ ಮಹಿಳೆ, ವಾಟ್ಸಾಪ್ ಸಂಖ್ಯೆ ಪಡೆದರು. ಬಳಿಕ ‘ಸ್ನೇಹದ ಕೊಡುಗೆ’ ಎಂದು ಪ್ಲಾಟಿನಂ ವಾಚ್, ಡೈಮಂಡ್, ಲ್ಯಾಪ್ಟಾಪ್, ಐಫೋನ್, 90,000 ಡಾಲರ್ ಮತ್ತು ಚಿನ್ನ ಕಳುಹಿಸುತ್ತೇನೆ ಎಂದು ತಿಳಿಸಿದನು.
ಆ ಬಳಿಕ ಮಹಿಳೆಗೆ ವಿಮಾನ ನಿಲ್ದಾಣದಿಂದ ಕರೆ ಬಂದು, ಗಿಫ್ಟ್ ಪ್ಯಾಕೇಜ್ಗಾಗಿ ಸೆಕ್ಯೂರಿಟಿ ಡಿಪಾಸಿಟ್ ಹಾಗೂ ಲಾಂಡರಿಂಗ್ ಕ್ಲಿಯರೆನ್ಸ್ಗಾಗಿ ಹಣ ಕಳುಹಿಸಲು ಸೂಚನೆ ನೀಡಲಾಯಿತು. ಇದನ್ನು ನಂಬಿ ಮಹಿಳೆ ವಿವಿಧ ಖಾತೆಗಳಿಗೆ 7.10 ಲಕ್ಷ ರೂ. ವರ್ಗಾಯಿಸಿದರು.
ಆದರೆ ವಂಚಕನಿಂದ ಯಾವುದೇ ಗಿಫ್ಟ್ ಬರದೇ ಇದ್ದುದರಿಂದ ಮಹಿಳೆ ವಂಚನೆಯ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.