
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ ನಡೆಸಿದ್ದು, ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಜಲ್ಲಿಪಾಳ್ಯದ ಬಳಿ ಈ ಭೀಕರ ಘಟನೆ ಸಂಭವಿಸಿದ್ದು, ಮೃತರನ್ನು ತಮಿಳುನಾಡಿನ ಮಾಕನಪಾಳ್ಯ ನಿವಾಸಿ ಶಿವಮೂರ್ತಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ
ಶಿವಮೂರ್ತಿ ಅವರು ಹೂಗ್ಯ ಎಂಬಲ್ಲಿ ಕೂಲಿ ಕೆಲಸ ಮುಗಿಸಿ, ಬುಧವಾರ ರಾತ್ರಿ ತಮ್ಮ ಬೈಕಿನಲ್ಲಿ ಜಲ್ಲಿಪಾಳ್ಯ ಮಾರ್ಗವಾಗಿ ತಮಿಳುನಾಡಿನ ಮಾಕನಪಾಳ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಕಾಡಿನಿಂದ ಏಕಾಏಕಿ ಬಂದ ಆನೆ ಬೈಕ್ ಮೇಲೆ ದಾಳಿ ನಡೆಸಿದೆ. ಆನೆಯ ತುಳಿತಕ್ಕೆ ಸಿಲುಕಿದ ಶಿವಮೂರ್ತಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೆಳಿಗ್ಗೆ ಬೆಳಕಿಗೆ ಬಂದ ಪ್ರಕರಣ
ಘಟನೆಯು ನಿರ್ಜನ ಪ್ರದೇಶದಲ್ಲಿ ರಾತ್ರಿ ನಡೆದಿರುವುದರಿಂದ ತಕ್ಷಣಕ್ಕೆ ಯಾರಿಗೂ ತಿಳಿದುಬಂದಿರಲಿಲ್ಲ. ಇಂದು (ಗುರುವಾರ) ಮುಂಜಾನೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾಗ ರಸ್ತೆಯ ಬದಿಯಲ್ಲಿ ಬೈಕ್ ಮತ್ತು ಮೃತದೇಹ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳ ಚಲನವಲನ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಪ್ರಯಾಣಿಸುವಾಗ ಜಾಗರೂಕತೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.



































