
ಕೋಲ್ಕತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸುವೇಂದು ಅಧಿಕಾರಿ ಅವರ ಮುಂದೆ ಬೆಟ್ಟದಷ್ಟು ಜವಾಬ್ದಾರಿಗಳಿವೆ. ಸುಮಾರು 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿದ್ದ ರಾಜ್ಯದ ಆಡಳಿತಾತ್ಮಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು ನೂತನ ಸರ್ಕಾರದ ಮೊದಲ ಆದ್ಯತೆಯಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಹೊಸ ಸಿಎಂ ಪಾಲಿಗೆ ಅಗ್ನಿಪರೀಕ್ಷೆಯಂತಿದೆ.
ರಾಜ್ಯದ ಅಭಿವೃದ್ಧಿಗೆ ‘ಡಬಲ್ ಇಂಜಿನ್’ ಸರ್ಕಾರದ ಶಕ್ತಿಯನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಕೇಂದ್ರ ಮತ್ತು ರಾಜ್ಯದ ನಡುವಿನ ಸಂಬಂಧವನ್ನು ವೃದ್ಧಿಸುವ ಮೂಲಕ ಸ್ಥಗಿತಗೊಂಡಿರುವ ಯೋಜನೆಗಳಿಗೆ ಮರುಜೀವ ನೀಡುವ ಯೋಜನೆ ರೂಪಿಸಲಾಗಿದೆ. ಸುಮಾರು 10 ಕೋಟಿ ಜನಸಂಖ್ಯೆ ಹೊಂದಿರುವ ಈ ಗಡಿ ರಾಜ್ಯದಲ್ಲಿ ಆಂತರಿಕ ಭದ್ರತೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಕಾಪಾಡುವುದು ಈಗಿನ ತುರ್ತು ಅಗತ್ಯವಾಗಿದೆ.
ನೂತನ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳು:
- ಒಳನುಸುಳುವಿಕೆ ತಡೆ: ರಾಜ್ಯದ ಗಡಿ ಭಾಗಗಳ ಮೂಲಕ ಅಕ್ರಮವಾಗಿ ಪ್ರವೇಶಿಸಿರುವವರನ್ನು ಗುರುತಿಸಿ, ವ್ಯವಸ್ಥಿತವಾಗಿ ಹೊರಹಾಕುವುದು ಸರ್ಕಾರದ ಪ್ರಮುಖ ಕಾರ್ಯಸೂಚಿಯಾಗಿದೆ.
- ಕಾನೂನು ಸುವ್ಯವಸ್ಥೆ: ಕಳೆದ ದಶಕದಲ್ಲಿ ವರದಿಯಾದ ರಾಜಕೀಯ ಹಿಂಸಾಚಾರ ಮತ್ತು ಕೋಮು ಸಂಘರ್ಷಗಳಿಗೆ ಅಂತ್ಯ ಹಾಡಿ, ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆ ಮೂಡಿಸುವುದು.
- ಆರ್ಥಿಕ ಸುಧಾರಣೆ: ರಾಜ್ಯದ ಮೇಲಿರುವ ಬೃಹತ್ ಸಾಲದ ಹೊರೆಯನ್ನು ಕಡಿಮೆ ಮಾಡಿ, ಜಿಡಿಪಿಯಲ್ಲಿ ಕೃಷಿ ಮತ್ತು ಸೇವಾ ವಲಯದ ಸಮತೋಲನ ಕಾಯ್ದುಕೊಳ್ಳುವುದು.
- ಖಾಸಗಿ ಹೂಡಿಕೆ: ಕೈಗಾರಿಕಾ ರಂಗದಲ್ಲಿ ಹಿಂದುಳಿದಿರುವ ಬಂಗಾಳಕ್ಕೆ ಹೆಚ್ಚಿನ ಖಾಸಗಿ ಉದ್ಯಮಿಗಳನ್ನು ಆಕರ್ಷಿಸಿ ಉದ್ಯೋಗ ಸೃಷ್ಟಿಸುವುದು.
- ಯೋಜನೆಗಳ ಪೂರ್ಣಗೊಳಿಸದ: ಅರ್ಧಕ್ಕೆ ನಿಂತಿರುವ ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ತಂದು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು.
ಬಂಗಾಳದ ಆರ್ಥಿಕತೆಯಲ್ಲಿ ಸೇವಾ ವಲಯವು ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಇಂದಿಗೂ ಬಹುಪಾಲು ಜನಸಂಖ್ಯೆ ಕೃಷಿಯನ್ನೇ ನೆಚ್ಚಿಕೊಂಡಿದೆ. ಹೀಗಾಗಿ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಅನಿವಾರ್ಯತೆ ಇದೆ. ಖಾಸಗಿ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವ ಮೂಲಕ ರಾಜ್ಯವನ್ನು ಕೈಗಾರಿಕಾ ಹಬ್ ಆಗಿ ಪರಿವರ್ತಿಸಲು ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ.



































