
ಮುಂಬೈ: ಬ್ಯಾಂಕ್ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರ ಭಾರತ ಆಗಮನದ ಕುರಿತು ಬಾಂಬೆ ಹೈಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆದಿದೆ. ಮಲ್ಯ ಅವರು ನ್ಯಾಯಾಲಯಕ್ಕೆ ಹಾಜರಾಗದ ಹೊರತು ಅವರ ಅರ್ಜಿಯನ್ನು ಆಲಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಹೈಕೋರ್ಟ್ ಕಠಿಣ ನಿಲುವು ತಳೆದಿತ್ತು. ಇದಕ್ಕೆ ಪ್ರತಿಯಾಗಿ ಮಲ್ಯ ಪರ ವಕೀಲ ಅಮಿತ್ ದೇಸಾಯಿ ಅವರು ನ್ಯಾಯಾಲಯಕ್ಕೆ ಮಲ್ಯ ಅವರ ಹೇಳಿಕೆಯನ್ನು ಸಲ್ಲಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮರಳುವ ದಿನಾಂಕ ನಿಗದಿಪಡಿಸಲು ತಾಂತ್ರಿಕ ತೊಂದರೆಗಳಿವೆ ಎಂದು ತಿಳಿಸಿದ್ದಾರೆ.
ಮಲ್ಯ ಅವರ ಹೇಳಿಕೆಯ ಪ್ರಕಾರ, ಭಾರತ ಸರ್ಕಾರವು ಈಗಾಗಲೇ ಅವರ ಪಾಸ್ಪೋರ್ಟ್ ಅನ್ನು ರದ್ದುಗೊಳಿಸಿದೆ, ಹೀಗಾಗಿ ಅವರು ಯಾವುದೇ ದೇಶಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ. ಇದರೊಂದಿಗೆ ಲಂಡನ್ನಲ್ಲೂ ಹಲವು ಕಾನೂನು ಪ್ರಕ್ರಿಯೆಗಳು ಬಾಕಿ ಇರುವುದರಿಂದ, ಬ್ರಿಟಿಷ್ ನ್ಯಾಯಾಲಯವು ಅವರನ್ನು ಲಂಡನ್ ಬಿಟ್ಟು ಹೋಗದಂತೆ ಸೂಚಿಸಿದೆ. ಹೀಗಾಗಿ “ಬರಲು ಇಚ್ಛೆ ಇದ್ದರೂ ಕಾನೂನು ತೊಡಕುಗಳಿಂದ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ” ಎಂಬ ಸಮರ್ಥನೆಯನ್ನು ಮಲ್ಯ ನೀಡಿದ್ದಾರೆ. ಈ ವಾದವನ್ನು ಆಲಿಸಿದ ಬಾಂಬೆ ಹೈಕೋರ್ಟ್, ಪರಾರಿಯಾಗಿರುವ ಉದ್ಯಮಿಯನ್ನು ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿಲುವು ಮತ್ತು ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ವಿವರವಾದ ಪ್ರತಿಕ್ರಿಯೆ ಕೇಳಿದೆ.



































