
ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ನಿನ್ನೆ ದಿನಾಂಕ 18-08-2025 ರಂದು ಅತಿಯಾದ ಮಳೆ ಹಾಗೂ ಸುಂಟರ ಗಾಳಿಯಿಂದಾಗಿ ಸುಮಾರು ನೂರಕ್ಕೂ ಹೆಚ್ಚಿನ ವಾಸದ ಮನೆಗಳಿಗೆ ಹಾನಿಯಾಗಿದ್ದು, ಜೊತೆಗೆ ಬೆಳೆ ಹಾನಿ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಅಪಾರ ಹಾನಿ ಉಂಟಾಗಿರುತ್ತದೆ.
ಕಾರ್ಕಳ ತಾಲೂಕಿನ ಬೆಳ್ಮಣ್, ಸೂಡ, ನಂದಳಿಕೆ, ರೆಂಜಾಳ, ಬೈಲೂರು, ಕಡ್ತಲ ಹಾಗೂ ಯರ್ಲಪಾಡಿ ಗ್ರಾಮಗಳ ಪರಿಸರದಲ್ಲಿ ಮತ್ತು ಹೆಬ್ರಿ ತಾಲೂಕಿನ ಚಾರ, ಕುಚ್ಚೂರು ಮತ್ತು ಮುದ್ರಾಡಿ ಗ್ರಾಮಗಳ ಪರಿಸರದಲ್ಲಿ ನಿನ್ನೆಯ ಸಂಜೆಯ ಹೊತ್ತಿಗೆ ಒಮ್ಮೆಲೆ ಬಂದ ಸುಂಟರಗಾಳಿ ಹಾಗೂ ಅತಿಯಾದ ಮಳೆ ಗಾಳಿಯಿಂದ ಆ ಪ್ರದೇಶದ ಹಲವು ಕಡೆಗಳಲ್ಲಿ ವಾಸದ ಮನೆಗಳು, ಕೃಷಿ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿದ್ದು , ತುರ್ತು ಪರಿಹಾರೋಪಾಯಗಳನ್ನು ಒದಗಿಸುವುದು ತುಂಬಾ ಅವಶ್ಯಕವಾಗಿರುವುದನ್ನು ಮನಗಂಡ ಕಾರ್ಕಳ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ರವರು ವಿಧಾನ ಸಭಾ ಅಧಿವೇಶನ ಸಂದರ್ಭದಲ್ಲಿ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮನವಿ ಸಲ್ಲಿಸಿರುತ್ತಾರೆ.
ಪ್ರಾಕೃತಿಕ ವಿಕೋಪದಿಂದ, ಪ್ರಮುಖವಾಗಿ ವಾಸದ ಮನೆಗಳಿಗೆ ಆಗಿರುವ ಹಾನಿಗೆ ಸಂಬಂದಿಸಿದಂತೆ ಸಚಿವರಿಗೆ ಮಾಹಿತಿ ನೀಡಿ, ತುರ್ತು ಅನುದಾನವನ್ನು ಬಿಡುಗಡೆ ಮಾಡುವಂತೆ ಹಾಗೂ ಆದಷ್ಟೂ ಶೀಘ್ರವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ ಎಂದು ಕಾರ್ಕಳ ಶಾಸಕರ ಕಛೇರಿ ‘ವಿಕಾಸ’ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



































