
ಪ್ರಯಾಗ್ರಾಜ್ : ಉತ್ತರ ಪ್ರದೇಶದ ಪ್ರಯಾಗ್ರಾಜ್ ಮೂಲದ ಮಹಿಳೆಯೊಬ್ಬರು ತನ್ನನ್ನು ವಂಚಿಸಿ, ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮತಾಂತರಕ್ಕೆ ನಿರಾಕರಿಸಿದಾಗ ಆರೋಪಿಯು ತನ್ನ ಮೇಲೆ ಹಲ್ಲೆ ನಡೆಸಿ, ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಗುರುತು ಮರೆಮಾಚಿದ್ದ ಆರೋಪಿ
ಪೊಲೀಸ್ ದೂರಿನ ಪ್ರಕಾರ, ಆರೋಪಿಯು ತನ್ನನ್ನು ‘ರಾಜ್’ ಎಂದು ಪರಿಚಯಿಸಿಕೊಂಡಿದ್ದ. ಆರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರು, ನಂತರ ಮದುವೆಯಾಗುವಂತೆ ರಾಜ್ ಮಹಿಳೆಯ ಮೇಲೆ ಒತ್ತಡ ಹೇರಿದ್ದ. 2024ರ ದೀಪಾವಳಿ ಸಮಯದಲ್ಲಿ ಬಡಾ ಇಮಾಂಬರಾಗೆ ಭೇಟಿ ನೀಡಿದಾಗ, ಆತನ ನಿಜವಾದ ಹೆಸರು ಮೊಹಮ್ಮದ್ ಫುರ್ಖಾನ್ ಎಂದು ಮಹಿಳೆಗೆ ತಿಳಿದು ಬಂದಿದೆ.
ಹಲ್ಲೆ, ಬ್ಲ್ಯಾಕ್ಮೇಲ್ ಆರೋಪ
ತನ್ನ ನಿಜವಾದ ಗುರುತು ಬಯಲಾದ ನಂತರ, ಮೊಹಮ್ಮದ್ ಫುರ್ಖಾನ್ ಮಹಿಳೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಆಕೆ ಇದಕ್ಕೆ ನಿರಾಕರಿಸಿದಾಗ ದೈಹಿಕವಾಗಿ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಆಕೆಯ ಖಾಸಗಿ ಫೋಟೊಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಸ್ಟ್ 7ರಂದು ಆರೋಪಿಯು ಆಕೆಯ ಮನೆಗೆ ಬಲವಂತವಾಗಿ ಪ್ರವೇಶಿಸಿ ಮತ್ತಷ್ಟು ಬೆದರಿಕೆ ಹಾಕಿದ್ದಾನೆ. ಆಗಸ್ಟ್ 11ರಂದು ಮಹಿಳೆ ಇಲ್ಲದಿದ್ದಾಗ, ಆಕೆಯ ಕೋಣೆಯ ಬೀಗ ಮುರಿದು ₹25,000 ನಗದನ್ನು ಕದ್ದಿದ್ದಾನೆ ಎಂದು ಹೇಳಲಾಗಿದೆ.
ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೂರ್ವ ವಲಯದ ಡಿಸಿಪಿ ಶಶಾಂಕ್ ಸಿಂಗ್ ಖಚಿತಪಡಿಸಿದ್ದಾರೆ.
25 ವರ್ಷದ ಮಹಿಳೆ ಪ್ರಸ್ತುತ ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ವಾಸವಾಗಿದ್ದು, 2023 ರಲ್ಲಿ ಬಿಬಿಡಿ ವಿಶ್ವವಿದ್ಯಾಲಯದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದರು. ತಂದೆಯ ಮರಣದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣ, ಆಗಸ್ಟ್ 2024 ರಲ್ಲಿ ಕಾಲೇಜು ಬಿಟ್ಟು ಸಣ್ಣ ಆಹಾರ ಅಂಗಡಿಯೊಂದನ್ನು ತೆರೆದಿದ್ದರು.