
ಲಕ್ನೋ (ಉತ್ತರ ಪ್ರದೇಶ): ರಾತ್ರಿ ವೇಳೆ ತನ್ನ ಹೆಂಡತಿ ಮಾನವ ರೂಪದಿಂದ ಹಾವಿನಂತೆ ಬದಲಾಗಿ ತನ್ನನ್ನು ಕಚ್ಚಿ ಕೊಲ್ಲಲು ಪ್ರಯತ್ನಿಸುತ್ತಾಳೆ ಎಂದು ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಆರೋಪಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.
ಸಾಮಾನ್ಯವಾಗಿ ವಿದ್ಯುತ್, ರಸ್ತೆ, ಪಡಿತರ ಚೀಟಿಗಳಿಗೆ ಸಂಬಂಧಿಸಿದ ದೂರುಗಳು ಬರುವ ಜಿಲ್ಲಾಧಿಕಾರಿಗಳ ಸಾರ್ವಜನಿಕ ಕುಂದುಕೊರತೆ ದಿನದಂದು ಈ ವಿಚಿತ್ರ ದೂರು ದಾಖಲಾಗಿದೆ. ಮಹಮೂದಾಬಾದ್ ಪ್ರದೇಶದ ಲೋಧ್ಸಾ ಗ್ರಾಮದ ನಿವಾಸಿ ಮೆರಾಜ್ ಎಂಬಾತ, ತನ್ನ ಹೆಂಡತಿ ನಸೀಮುನ್ ರಾತ್ರಿ ಹಾವಾಗಿ ಬದಲಾಗಿ ತನ್ನನ್ನು ಕಚ್ಚಲು ಪ್ರಯತ್ನಿಸುತ್ತಾಳೆ ಎಂದು ಜಿಲ್ಲಾಧಿಕಾರಿಯವರಿಗೆ ದೂರಿದ್ದಾನೆ!
ಮೆರಾಜ್ ನೀಡಿರುವ ದೂರಿನ ಪ್ರಕಾರ, ಆಕೆಯು ಹಲವು ಬಾರಿ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಳು, ಆದರೆ ಪ್ರತಿ ಬಾರಿಯೂ ಸಮಯಕ್ಕೆ ಸರಿಯಾಗಿ ಎಚ್ಚರವಾಗಿದ್ದರಿಂದ ದಾಳಿಯಿಂದ ತಪ್ಪಿಸಿಕೊಂಡಿದ್ದೇನೆ. ಅಲ್ಲದೇ ಆಕೆ ತನ್ನನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದು, ಯಾವುದೇ ರಾತ್ರಿ ತನ್ನನ್ನು ಕೊಲ್ಲಬಹುದು ಎಂದು ಅಳಲು ತೋಡಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ಸುರಿಮಳೆ
ಈ ವಿಚಿತ್ರ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಇದಕ್ಕೆ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಅವಳು ಯಾರನ್ನು ಕಚ್ಚುತ್ತಿದ್ದಾಳೆ ಅಂತ ಯಾರಿಗೆ ಗೊತ್ತು?” ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದರೆ, ಮತ್ತೊಬ್ಬರು, “ಆ ವ್ಯಕ್ತಿ ತುಂಬಾ ಅದೃಷ್ಟಶಾಲಿ… ಆತ ತನ್ನ ವೈವಾಹಿಕ ಜೀವನದಲ್ಲಿ ಶ್ರೀದೇವಿಯನ್ನು ಪಡೆದಿದ್ದಾನೆ” ಎಂದು 1986ರ ‘ನಾಗಿನ್’ ಹಿಂದಿ ಚಿತ್ರವನ್ನು ಉಲ್ಲೇಖಿಸಿ ಗೇಲಿ ಮಾಡಿದ್ದಾರೆ.
ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಈ ದೂರನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಇದು ಮಾನಸಿಕ ಕಿರುಕುಳದ ಪ್ರಕರಣವಿರಬಹುದು ಎಂದು ಪರಿಗಣಿಸಿರುವುದಾಗಿ ವರದಿಯಾಗಿದೆ.



































