
ಉಡುಪಿ : ದೇಶಪ್ರೇಮ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಉದ್ದಕ್ಕೂ ಭಾಷಣ ಮಾಡುವ ಬಿಜೆಪಿ ನಾಯಕರ ಅಸಲಿ ಬಣ್ಣ ಈಗ ಬಯಲಾಗಿದೆ. ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಯವರಿಗೆ ಸೇರಿದ ರೆಸಾರ್ಟ್ನಲ್ಲಿ ಅಕ್ರಮ ವಿದೇಶಿ ವಲಸಿಗರು ಪತ್ತೆಯಾಗಿರುವುದು ಕೇವಲ ಕಾನೂನು ಉಲ್ಲಂಘನೆ ಮಾತ್ರವಲ್ಲ, ಇದು ದೇಶದ ಆಂತರಿಕ ಭದ್ರತೆಗೆ ಎಸಗಿದ ದ್ರೋಹವಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.
“ನುಸುಳುಕೋರರ” ಬಗ್ಗೆ ಮಾತನಾಡುವ ಬಿಜೆಪಿಗರು, ತಮ್ಮದೇ ಲಾಭಕ್ಕಾಗಿ ಅಕ್ರಮ ವಲಸಿಗರಿಗೆ ಉದ್ಯೋಗ ನೀಡಿರುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ. ಸ್ವಾರ್ಥಕ್ಕೆ ಹಣ ಸಂಪಾದಿಸಲು ವಿದೇಶಿಗರನ್ನು ಬಳಸಿಕೊಳ್ಳುವುದು, ರಾಜಕೀಯ ಬಾಷಣ ಮಾಡಿ ಬೇರೆಯವರಿಗೆ ದೇಶಭಕ್ತಿಯ ಭೋದನೆ ಮಾಡುವುದು ಅವರ ಹಳೆಯ ಚಾಳಿ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರ ಈ ನಡೆ ದೇಶದ ಭದ್ರತೆಗೆ ನೇರ ಸವಾಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಈ ಜಾಲದ ಹಿಂದೆ ಯಾರಿದ್ದಾರೆ ಮತ್ತು ಇವರಿಗೆ ರಾಜಕೀಯ ಕುಮ್ಮಕ್ಕು ಯಾರಿಂದ ಸಿಗುತ್ತಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕೇವಲ ಕೆಲಸಗಾರರ ಮೇಲೆ ಕ್ರಮ ಕೈಗೊಂಡರೆ ಸಾಲದು, ಬಾಂಗ್ಲಾ ನುಸುಳುಕೋರರಿಗೆ ಮಮತಾ ಬ್ಯಾನರ್ಜಿ ಯವರು ಆಶ್ರಯ ಕೊಟ್ಟಿದ್ದಾರೆಂದು ಆರೋಪ ಮಾಡುವ ಬಿಜೆಪಿಗರು, ತಮ್ಮಲ್ಲಿಯೇ ಉದ್ಯೋಗಕ್ಕೆ ವಿದೇಶಿಯರನ್ನು ಇಟ್ಟುಕೊಳ್ಳುತ್ತಾರೆ. ವಿದೇಶಿಗರಿಗೆ ಆಶ್ರಯ ನೀಡಿದ ರೆಸಾರ್ಟ್ ಮಾಲೀಕ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು (SP) ಒತ್ತಾಯಿಸುತ್ತೇವೆ.
ಇತರ ಸಂದರ್ಭಗಳಲ್ಲಿ ಬೀದಿಗಿಳಿಯುವ ಬಿಜೆಪಿ ನಾಯಕರು, ಈಗ ತಮ್ಮದೇ ಪದಾಧಿಕಾರಿ ರಾಷ್ಟ್ರದ್ರೋಹಿ ಎನ್ನಬಹುದಾದ ಕೆಲಸದಲ್ಲಿ ಭಾಗಿಯಾಗಿರುವಾಗ ಮೌನಕ್ಕೆ ಶರಣಾಗಿರುವುದು ಏಕೆ? ಜಿಲ್ಲಾ ಬಿಜೆಪಿ ಘಟಕವು ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. “ದೇಶದ ಭದ್ರತೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಈ ಪ್ರಕರಣವನ್ನು ನಾವು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುತ್ತೇವೆ. ತಪ್ಪಿತಸ್ಥ ಬಿಜೆಪಿ ನಾಯಕನ ವಿರುದ್ಧ ತಕ್ಷಣ ಕ್ರಮ ಜರುಗಿಸದಿದ್ದರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಜೋಗಿಯವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.



































