
ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಶ್ರಯದಲ್ಲಿ ಜರಗಲಿರುವ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ 2025 ಉತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರು ಬಿಡುಗಡೆಗೊಳಿಸಿದರು. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಈ ದಸರಾ ಉತ್ಸವವು ನಡೆಯಲಿದೆ.
ಮೈಸೂರು ದಸರಾ ಮಾದರಿಯಲ್ಲಿ ಸಿದ್ಧತೆ
ಉಚ್ಚಿಲ ದಸರಾವನ್ನು ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲಿಯೇ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಡಾ. ಜಿ. ಶಂಕರ್ ತಿಳಿಸಿದ್ದಾರೆ. ಈ ವರ್ಷ ಹಿಂದಿಗಿಂತಲೂ ಮತ್ತಷ್ಟು ಅದ್ದೂರಿಯಾಗಿ ನಡೆಯಲಿರುವ ಈ ಉತ್ಸವದಲ್ಲಿ ಹಲವು ಸ್ಪರ್ಧಾತ್ಮಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ಕುಂಕುಮಾರ್ಚನೆ, ನೃತ್ಯ ವೈವಿಧ್ಯ, ಕುಸ್ತಿ, ದೇಹದಾರ್ಢ್ಯ, ಹೆಣ್ಣು ಮಕ್ಕಳ ಹುಲಿ ಕುಣಿತ, ಸಾಮೂಹಿಕ ದಾಂಡಿಯಾ ನೃತ್ಯ, ವಸ್ತು ಪ್ರದರ್ಶನ ಮತ್ತು ಗುರುಕಿರಣ್ ನೈಟ್ಸ್
ಕಾರ್ಯಕ್ರಮಗಳು ದಸರಾ ಉತ್ಸವಕ್ಕೆ ಇನ್ನಷ್ಟು ಮೆರಗು ತರಲಿವೆ.

ಸರ್ಕಾರದಿಂದ ವಿಶೇಷ ಅನುದಾನದ ಭರವಸೆ
ಉಡುಪಿ ಉಚ್ಚಿಲ ದಸರಾ ಸಮಿತಿಯ ಆಶಯದಂತೆ ಈ ಉತ್ಸವವನ್ನು ಎಲ್ಲರನ್ನೂ ಒಳಗೊಳ್ಳುವಂತಹ ಜಿಲ್ಲಾ ನಾಡಹಬ್ಬವನ್ನಾಗಿ ಆಚರಿಸಲು ಎಲ್ಲ ಸಹಕಾರ ನೀಡಲಾಗುವುದು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು. ಅಲ್ಲದೆ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಲಾವಿದರನ್ನು ಸೇರಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರದ ವಿಶೇಷ ಅನುದಾನಕ್ಕಾಗಿ ಮನವಿ ಮಾಡುವುದಾಗಿಯೂ ಅವರು ಹೇಳಿದರು. ಈ ಉತ್ಸವಕ್ಕೆ ಮೈಸೂರು ಮತ್ತು ಮಂಗಳೂರು ದಸರಾದಂತೆಯೇ ವಿಶ್ವಮನ್ನಣೆ ಸಿಗುವ ನಿರೀಕ್ಷೆಯಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅಭಿಪ್ರಾಯಪಟ್ಟರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಶಾಸಕರಾದ ಯಶಪಾಲ್ ಎ. ಸುವರ್ಣ, ಮಾಜಿ ಶಾಸಕ ಗೋಪಾಲ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.