
ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ನಗರಿ ಉಡುಪಿಯಲ್ಲಿ ಇಂದು ಅದ್ಧೂರಿ ‘ಸಂಗೀತಾ ರಸಮಂಜರಿ’ ಕಾರ್ಯಕ್ರಮ ಆಯೋಜನೆಯಾಗಿದೆ. ಗಂಗಾಧರ್ ಆಚಾರ್ಯ ಪೆರ್ಡೂರು ಹಾಗೂ ದಿನೇಶ್ ಕರ್ಕೇರ ಹೆರ್ಗ ಅವರ ನೇತೃತ್ವದ ‘ಸಿಂಚನ ಮ್ಯೂಸಿಕಲ್ಸ್’ ತಂಡದಿಂದ ಈ ಕಲಾ ಸಂಜೆ ಮೂಡಿಬರಲಿದೆ.
ಉಡುಪಿಯ ಡಯಾನಾ ಸರ್ಕಲ್ ಬಳಿಯ ಕಲ್ಯಾಣ್ ಜ್ಯುವೆಲ್ಲರ್ಸ್ ಎದುರು ನಿರ್ಮಿಸಲಾದ ವೇದಿಕೆಯಲ್ಲಿ ಇಂದು ಸಂಜೆ 7:30 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ವಾಹಿನಿಗಳ ಖ್ಯಾತ ರಿಯಾಲಿಟಿ ಶೋ ಗಾಯಕರು ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಹಾಗೂ ಕೇರಳದ ಖ್ಯಾತ ಕಲಾತಂಡಗಳು ಧ್ವನಿಗೂಡಿಸಲಿವೆ. ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಜಯಶ್ರೀರಾಜ್ ಹಾಗೂ ಭದ್ರಾವತಿಯ ಜೂನಿಯರ್ ಅಂಬರೀಶ್ ಖ್ಯಾತಿಯ ಆರಾಧ್ಯ ಅವರು ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಈ ಸಂಗೀತ ಸಂಜೆಯ ಪ್ರಮುಖ ಆಕರ್ಷಣೆಯಾಗಿ ಕೇರಳದ ಖ್ಯಾತ ಗಾಯಕರಾದ ನಿತಿನ್, VJ ಶಶಿಕುಮಾರ್ ಮತ್ತು ಶ್ರಮಿತಾ ಸುವರ್ಣ ಅವರು ತಮ್ಮ ಗಾಯನದ ಮೂಲಕ ಜನರನ್ನು ರಂಜಿಸಲಿದ್ದಾರೆ. ಇವರ ಜೊತೆಗೆ ಕರಾವಳಿಯ ಪ್ರತಿಭೆಗಳಾದ ಪೆರ್ಡೂರಿನ ಸ್ವಪ್ನಾ ಹಾಗೂ ಹಿರಿಯಡ್ಕದ ರಚನಾ ಅವರು ಸುಶ್ರಾವ್ಯವಾಗಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಕಳೆ ನೀಡಲಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ‘ಕ್ರೇಜಿ ಕಿಡ್ಸ್ ಪರ್ಕಳ’ ತಂಡದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಲಿದ್ದು, ಖ್ಯಾತ ನಿರೂಪಕರಾದ ಸ್ವರಾಜ್ ಶೆಟ್ಟಿ, ವಿಜೇತಾ ಶೆಟ್ಟಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹರೀಶ್ ಸಾಲಿಯಾನ್ ಅವರ ಸಂಪೂರ್ಣ ಸಹಕಾರದೊಂದಿಗೆ ಈ ಸಂಗೀತ ಸುಧೆ ಹರಿಯಲಿದೆ.



































