
ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಇಂದು ಭಕ್ತಿಯ ಪರಾಕಾಷ್ಠೆ ಮೇಳೈಸಿದೆ. ಶೀರೂರು ಮಠದ 31ನೇ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಭಾನುವಾರ ಮುಂಜಾನೆ ಶಾಸ್ತ್ರೋಕ್ತವಾಗಿ ‘ಸರ್ವಜ್ಞ ಪೀಠ’ ಅಲಂಕರಿಸುವ ಮೂಲಕ ಮುಂದಿನ 2 ವರ್ಷಗಳ ಶ್ರೀಕೃಷ್ಣ ಪೂಜಾ ಅಧಿಕಾರವನ್ನು ವಹಿಸಿಕೊಂಡರು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ಈ ಪರ್ಯಾಯ ಮಹೋತ್ಸವವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಜನವರಿ 18ರ ಮುಂಜಾನೆ 1.15ಕ್ಕೆ ಕಾಪುವಿನ ಪವಿತ್ರ ದಂಡತೀರ್ಥದಲ್ಲಿ ಪುಣ್ಯಸ್ನಾನಗೈದ ಶ್ರೀಗಳು, ನಂತರ ಜೋಡುಕಟ್ಟೆಯಿಂದ ಆರಂಭವಾದ ಭವ್ಯ ಮೆರವಣಿಗೆಯಲ್ಲಿ ಸಾಗಿಬಂದರು. ಮುಂಜಾನೆ 5.15ರ ಸುಮಾರಿಗೆ ಕನಕನ ಕಿಂಡಿಯ ಮೂಲಕ ಕೃಷ್ಣದರ್ಶನ ಪಡೆದು, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಿಕಟಪೂರ್ವ ಪರ್ಯಾಯ ಪೀಠಾಧೀಶರಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ವೇದವರ್ಧನ ತೀರ್ಥರನ್ನು ಅಕ್ಷಯ ಪಾತ್ರೆ ನೀಡಿ ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿದರು. ಪೀಠಾರೋಹಣಕ್ಕೂ ಮುನ್ನ ಶ್ರೀಗಳು ತಮ್ಮ ಮಾತೃಶ್ರೀಯವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು.
ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಮೈಸೂರು ಸಂಸದ ಯದುವೀರ್ ಒಡೆಯರ್ ಹಾಗೂ ಅಷ್ಟಮಠದ ಯತಿವರ್ಯರು ಪಾಲ್ಗೊಂಡು ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು.




































