
ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದ ಶೀರೂರು ಪರ್ಯಾಯ ಮಹೋತ್ಸವದ ಅದ್ಧೂರಿ ಆಚರಣೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ವಾಹನ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಭಕ್ತಾದಿಗಳ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಜನವರಿ 17 ರ ಮಧ್ಯಾಹ್ನದಿಂದ ಜನವರಿ 18 ರ ಬೆಳಗಿನ ಜಾವದವರೆಗೆ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ದಕ್ಷಿಣದ ಮಂಗಳೂರು ಕಡೆಯಿಂದ ಮಣಿಪಾಲ ಅಥವಾ ಉಡುಪಿ ಕಡೆಗೆ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಕರಾವಳಿ ಜಂಕ್ಷನ್ ತಲುಪಿ, ಅಲ್ಲಿಂದ ಬನ್ನಂಜೆ ರಸ್ತೆಯಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು. ಆದರೆ, ಜನವರಿ 17 ರ ಸಂಜೆ 7 ಗಂಟೆಯ ನಂತರ ನಗರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಎಲ್ಲಾ ವಾಹನಗಳಿಗೆ ಕರಾವಳಿ ಜಂಕ್ಷನ್ನೇ ಅಂತಿಮ ನಿಲ್ದಾಣವಾಗಿರಲಿದೆ. ಅಲ್ಲಿಂದ ಮಣಿಪಾಲಕ್ಕೆ ತೆರಳುವವರು ಅಂಬಾಗಿಲು ಮತ್ತು ಪೆರಂಪಳ್ಳಿ ರಸ್ತೆಯ ಬದಲಿ ಮಾರ್ಗವನ್ನು ಬಳಸಬೇಕಾಗುತ್ತದೆ.
ಕುಂದಾಪುರದಿಂದ ಬರುವ ವಾಹನಗಳಿಗೂ ಇದೇ ರೀತಿಯ ನಿಯಮ ಅನ್ವಯವಾಗಲಿದ್ದು, ಸಂಜೆ 7 ರ ನಂತರ ಕರಾವಳಿ ಜಂಕ್ಷನ್ನಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಸ್ ತೆರಳಲು ಸೂಚಿಸಲಾಗಿದೆ. ಮಲ್ಪೆ ಕಡೆಯಿಂದ ಬರುವ ಬಸ್ಸುಗಳು ಆದಿ ಉಡುಪಿ ಜಂಕ್ಷನ್ ವರೆಗೆ ಮಾತ್ರ ಸಂಚರಿಸಲು ಅವಕಾಶವಿದೆ. ಇನ್ನು ಬೆಂಗಳೂರು ಮತ್ತು ಮುಂಬೈ ಕಡೆಗೆ ಪ್ರಯಾಣಿಸುವ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಸುಗಳು ಕರಾವಳಿ ಜಂಕ್ಷನ್ನ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಅಂಬಲಪಾಡಿಯಿಂದ ಜೋಡುಕಟ್ಟೆ, ಬ್ರಹ್ಮಗಿರಿಯಿಂದ ಬನ್ನಂಜೆ ಮತ್ತು ಕಲ್ಸಂಕದಿಂದ ರಾಜಾಂಗಣದವರೆಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪರ್ಯಾಯದ ಪ್ರಮುಖ ಕೇಂದ್ರವಾದ ರಥಬೀದಿಯಲ್ಲಿ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿಲ್ಲ. ಸಾರ್ವಜನಿಕರು ಮತ್ತು ಭಕ್ತಾದಿಗಳು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.



































