
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಕಲೆ ಮತ್ತು ಶಿಕ್ಷಣದ ಅಪೂರ್ವ ಸಂಗಮ ನಡೆದಿದೆ. ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಮೈನ್) ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಯಕ್ಷ ಶಿಕ್ಷಣ’ ಎಂಬ ವಿಶೇಷ ಬಡಗುತಿಟ್ಟು ಯಕ್ಷಗಾನ ತರಬೇತಿ ಶಿಬಿರಕ್ಕೆ 22.01.2026 ರ ಗುರುವಾರದಂದು ಅದ್ಧೂರಿ ಚಾಲನೆ ನೀಡಲಾಯಿತು.
ಹಲವು ಯಕ್ಷಗಾನ ಮೇಳಗಳ ಸಾರಥ್ಯ ವಹಿಸಿರುವ ಹಾಗೂ ಪ್ರತಿಷ್ಠಿತ ಕಲಾ ಸಂಘಟಕರೆಂದೇ ಗುರುತಿಸಲ್ಪಟ್ಟಿರುವ ಶ್ರೀ ಪಳ್ಳಿ ಕಿಶನ್ ಕುಮಾರ್ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶೇಷವೆಂದರೆ, ಹೆಗ್ಡೆ ಅವರು ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಈ ಕುರಿತು ಅತೀವ ಸಂತಸ ವ್ಯಕ್ತಪಡಿಸಿದ ಅವರು, ತಾನು ಓದಿದ ಶಾಲೆಯಲ್ಲೇ ಇಂದಿನ ಮಕ್ಕಳಿಗೆ ಸಾಂಸ್ಕೃತಿಕ ಶಿಕ್ಷಣ ನೀಡುವ ಇಂತಹ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ವೈಯಕ್ತಿಕವಾಗಿ ತಮಗೆ ಹೆಮ್ಮೆಯ ಮತ್ತು ಭಾವುಕ ಕ್ಷಣವಾಗಿದೆ ಎಂದು ನುಡಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ ಬೈಲೂರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಪಠ್ಯದ ಜೊತೆಗೆ ಇಂತಹ ಕಲಾ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದರು. ವೇದಿಕೆಯಲ್ಲಿ ಯಕ್ಷಗಾನ ಗುರುಗಳಾದ ಸುರೇಶ್ ಆಚಾರ್ಯ ಮರ್ಣೆ ಹಾಗೂ ಎಸ್ಡಿಎಂಸಿ ಉಪಾಧ್ಯಕ್ಷರಾದ ಪುಷ್ಪಲತಾ ಅವರು ಉಪಸ್ಥಿತರಿದ್ದು, ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಆಶಾ ಬಾನು ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಶಿಕ್ಷಕರಾದ ಪ್ರಕಾಶ್ ಕುಂದರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸುರೇಖಾ ಡಿ. ಶೇಟ್ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಈ ವಿಶಿಷ್ಟ ಕಲಾ ತರಬೇತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.



































