
ಉಡುಪಿ : ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ದೆಂದೂರ್ ಕಟ್ಟೆ ಬಳಿ ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆಯೊಬ್ಬರು ಧಾರಾಕಾರ ಮಳೆಯಲ್ಲಿ ನೆನೆಯುತ್ತಾ ರಸ್ತೆ ಬದಿಯಲ್ಲಿ ದೀರ್ಘ ಸಮಯ ಕುಳಿತಿದ್ದವರನ್ನು ಸ್ಥಳೀಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ತಕ್ಷಣ ಸ್ಪಂದಿಸಿ ರಕ್ಷಣೆ ಮಾಡಿರುವ ಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಅಂದಾಜು 45 ವರ್ಷ ವಯಸ್ಸಿನ ಶಾಂತ ಎಂಬ ಹೆಸರನ್ನು ಮಾತ್ರ ಹೇಳಿರುವ ಮಹಿಳೆ, ತನ್ನ ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಮನನೊಂದ ಸ್ಥಿತಿಯಲ್ಲಿ ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ರಸ್ತೆ ಬದಿಗೆ ಬಂದು ಕುಳಿತಿದ್ದಾರೆ. ಅಲ್ಲಿಂದ ಸಾಯಂಕಾಲದವರೆಗೆ ಮಳೆಯಲ್ಲಿ ನನೆಯುತ್ತಾ ಒಂದೇ ಕಡೆಯಲ್ಲಿ ಕುಳಿತಿರುವ ದೃಶ್ಯ ಕಂಡು ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು.
ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ವಿಶು ಶೆಟ್ಟಿಯವರು ಸ್ಥಳಕ್ಕೆ ಧಾವಿಸಿದಾಗ, ಮಹಿಳೆ ಯಾವುದೇ ಸಹಕಾರ ನೀಡದೇ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. “ನಾನು ಎಲ್ಲಿಗೂ ಹೋಗುವುದಿಲ್ಲ, ಬೆಳಿಗ್ಗೆಯಿಂದ ಊಟವಿಲ್ಲದೆ ಇಲ್ಲಿ ಮಳೆಯಲ್ಲೇ ಕುಳಿತಿದ್ದೇನೆ” ಎಂದು ಹೇಳಿದ್ದಾರೆ. ಕೊನೆಗೆ ವಿಶು ಶೆಟ್ಟಿ ಅವರು ಮಹಿಳೆಯೊಂದಿಗೆ ಮಾತನಾಡಿ ಅವರ ಮನವೊಲಿಸಿ , ಮಹಿಳೆಯನ್ನು ಸುರಕ್ಷಿತವಾಗಿ ‘ಸಖಿ ಸೆಂಟರ್’ಗೆ ದಾಖಲಿಸಿದ್ದಾರೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಮಹಿಳೆಯು ಯಾವುದೇ ಸ್ಪಷ್ಟ ವಿಳಾಸ ಅಥವಾ ಕುಟುಂಬದ ವಿವರಗಳನ್ನು ನೀಡದಿರುವುದರಿಂದ, ಅವರ ಸಂಬಂಧಿಕರು ‘ಸಖಿ ಸೆಂಟರ್’ ಅಥವಾ ಕಾಪು ಠಾಣೆಯನ್ನು ತಕ್ಷಣ ಸಂಪರ್ಕಿಸಬೇಕೆಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ.
ಈ ಘಟನೆಯು ಸಾರ್ವಜನಿಕರಲ್ಲಿ ಮಾನವೀಯ ಮೌಲ್ಯಗಳ ಪ್ರತಿಫಲನವಾಗಿ ಮೆಚ್ಚುಗೆ ಪಡೆಯುತ್ತಿದೆ.