
ಉಡುಪಿ: ಶಿವಮೊಗ್ಗ ಜಿಲ್ಲೆಯ ಭೀಮನಕೋಣೆ ಚರಕ ಮಹಿಳಾ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಕೈಮಗ್ಗ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮಾರ್ಚ್.7ರಿಂದ 9ರವರೆಗೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಮೇಳವು ಬೆಳಗ್ಗೆ 10ರಿಂದ ರಾತ್ರಿ 8:30ರವರೆಗೆ ನಡೆಯಲಿದೆ.
ಮಾರ್ಚ್.7ರಂದು ಮಧ್ಯಾಹ್ನ 12:30ಕ್ಕೆ ಉಡುಪಿಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಮೇಳವನ್ನು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಚರಕದ ಅಧ್ಯಕ್ಷೆ ಮಹಾಲಕ್ಷ್ಮೀ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾರುಕಟ್ಟೆ ಮತ್ತು ವಿನ್ಯಾಸ ವಿಭಾಗದ ವ್ಯವಸ್ಥಾಪಕಿ ಪದ್ಮಶ್ರೀ ತಿಳಿಸಿದರು.
ಅಪರೂಪದ ಕೈಮಗ್ಗ ಬಟ್ಟೆಗಳ ಸಮೂಹ ಪ್ರದರ್ಶನ
ಮೇಳದಲ್ಲಿ 10 ಮಳಿಗೆಗಳು ಇರಲಿದ್ದು, ನೈಸರ್ಗಿಕ ಬಣ್ಣದ ಕೈಮಗ್ಗ ಬಟ್ಟೆಗಳು, ಸಿದ್ಧ ಉಡುಪುಗಳು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅಪರೂಪದ ಗಾಡಿ ದಡಿ, ಗೋಮಿ ದಡಿ, ಚುಕ್ಕಿ ಪರಸ್, ತೊಡೆ ಪರಸ್, ಕಿನ್ನಾಳ ಸೀರೆಗಳು ಹಾಗೂ ಟವೆಲ್ಸ್, ಬೆಡ್ಶೀಟ್ಗಳು, ರೇಷ್ಮೆ ಸೀರೆಗಳು ಮಾರಾಟಕ್ಕೆ ಲಭ್ಯವಿರುತ್ತವೆ.
ಇದೇ ವೇಳೆ ಟೆರಾಬಾನ್ ಅವರ ಕರಕುಶಲ ಟೆರಾಕೋಟಾ ಮತ್ತು ಮೆಟಲ್ ಆಭರಣಗಳು, ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನಗಳು, ಸಾವಯವ ಆಹಾರ ಪದಾರ್ಥಗಳು, ಸಿರಿಧಾನ್ಯ ಆಧಾರಿತ ಆಹಾರಗಳು ಹಾಗೂ ಮಕ್ಕಳಿಗಾಗಿ ಪುಸ್ತಕ ಮಳಿಗೆಗಳು ಇರುತ್ತವೆ.
750 ಜನರಿಗೆ ಉದ್ಯೋಗ ನೀಡಿದ ಚರಕ ಸಂಘ
ಈ ಸಂಘವು ಕಳೆದ 29 ವರ್ಷಗಳಿಂದ ಕೈಮಗ್ಗ ವಸ್ತ್ರ ಹಾಗೂ ಸಿದ್ಧವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಸ್ಥಳೀಯ 350 ಜನ ಹಾಗೂ ರಾಜ್ಯದ ಬೇರೆ ಜಿಲ್ಲೆಗಳ 400 ಜನ ನೇಕಾರರು ಸೇರಿದಂತೆ ಒಟ್ಟು 750 ಜನರಿಗೆ ಉದ್ಯೋಗ ನೀಡಿದೆ ಎಂದು ಸಂಘದ ಪ್ರತಿನಿಧಿಗಳು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಿಇಒ ಪೀಟರ್, ಅಧ್ಯಕ್ಷೆ ಮಹಾಲಕ್ಷ್ಮೀ ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.
