
ಉಡುಪಿ: ನಗರಕ್ಕೆ ಹೊಂದಿಕೊಂಡಂತಿರುವ ಗರಡಿಮಜಲು ಎಂಬಲ್ಲಿ ರಾತ್ರಿ ವೇಳೆಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಗೆ ಚಿರತೆಯೊಂದು ನುಗ್ಗಿ ತನ್ನ ಪಂಜದಿಂದ ಸೀಟುಗಳನ್ನು ಹರಿದು ಹಾಕಿರುವುದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಕೆಲಸ ಮುಗಿಸಿ ಮನೆಗೆ ತೆರಳಿದ್ದ ಸಿಬ್ಬಂದಿ ಬೆಳಿಗ್ಗೆ ಬಸ್ಸಿನ ಬಳಿ ಬಂದಾಗ ಈ ಕರಾಳ ದೃಶ್ಯ ಗೋಚರವಾಗಿದೆ. ಬಸ್ಸಿನ ಒಳಗಿನ ಡ್ರೈವರ್ ಸೀಟು ಹಾಗೂ ಬಾನೆಟ್ ಮೇಲಿದ್ದ ಕುಶನ್ಗಳನ್ನು ಚಿರತೆಯು ಹರಿದು ಚಿಂದಿ ಮಾಡಿದೆ.
ಆರಂಭದಲ್ಲಿ ಇದು ಕಿಡಿಗೇಡಿಗಳ ಕೆಲಸವೆಂದು ಭಾವಿಸಲಾಗಿದ್ದರೂ, ಬಸ್ಸಿನ ಗಾಜಿನ ಮೇಲೆ ಹಾಗೂ ಒಳಗಡೆ ಪತ್ತೆಯಾದ ದೊಡ್ಡ ಗಾತ್ರದ ಕಾಡುಪ್ರಾಣಿಯ ಪಂಜದ ಗುರುತುಗಳು ಚಿರತೆಯೇ ಈ ಕೃತ್ಯ ಎಸಗಿದೆ ಎಂಬುದನ್ನು ಪುಷ್ಟೀಕರಿಸಿವೆ. ಈ ಪ್ರದೇಶದ ಸುತ್ತಮುತ್ತಲ ಕುರುಚಲು ಕಾಡುಗಳಲ್ಲಿ ಈಗಾಗಲೇ ಚಿರತೆಯ ಓಡಾಟವಿರುವುದು ಸಿಸಿಟಿವಿ ದೃಶ್ಯಗಳಿಂದ ಈ ಹಿಂದೆ ದೃಢಪಟ್ಟಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಹಿಡಿಯಲು ತಕ್ಷಣವೇ ಬೋನು ಅಳವಡಿಸಿದ್ದಾರೆ. ವನ್ಯಮೃಗ ಸೆರೆಯಾಗುವವರೆಗೆ ಜನರು ರಾತ್ರಿ ವೇಳೆ ಅನಗತ್ಯವಾಗಿ ಸಂಚರಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.



































