
ಉಡುಪಿ: ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ಕೋಡಿಬೆಂಗ್ರೆ ಡೆಲ್ಟಾ ಬೀಚ್ ಸಮೀಪ ಮಧ್ಯಾಹ್ನ ಭೀಕರ ದೋಣಿ ದುರಂತ ಸಂಭವಿಸಿದ್ದು, ಮೈಸೂರು ಮೂಲದ ಇಬ್ಬರು ಯುವ ಪ್ರವಾಸಿಗರು ಜಲಸಮಾಧಿಯಾಗಿದ್ದಾರೆ.
ಮೈಸೂರಿನ ಸರಸ್ವತೀಪುರಂ ನಿವಾಸಿಗಳಾದ ಶಂಕರಪ್ಪ (22) ಹಾಗೂ ಸಿಂಧು (23) ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ಮೈಸೂರಿನ ಖಾಸಗಿ ಕಾಲ್ ಸೆಂಟರ್ನಲ್ಲಿ ಉದ್ಯೋಗಿಗಳಾಗಿದ್ದು, ಗಣರಾಜ್ಯೋತ್ಸವದ ರಜೆಯ ಮೋಜಿನಲ್ಲಿದ್ದಾಗ ಈ ಘಟನೆ ಜರುಗಿದೆ. ಪ್ರಸ್ತುತ ದೀಶಾ (26) ಎಂಬ ಯುವತಿಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಧರ್ಮರಾಜ (26) ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ: ಒಟ್ಟು 14 ಮಂದಿ ಸಹೋದ್ಯೋಗಿಗಳ ತಂಡ ಉಡುಪಿಗೆ ಪ್ರವಾಸಕ್ಕೆಂದು ಆಗಮಿಸಿತ್ತು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೋಡಿಬೆಂಗ್ರೆ ಡೆಲ್ಟಾ ಬೀಚ್ನಿಂದ ಪ್ರವಾಸಿ ದೋಣಿಯ ಮೂಲಕ ಸಮುದ್ರ ವಿಹಾರಕ್ಕೆ ತೆರಳಿದ್ದರು. ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ಬಳಿ ನದಿ ಮತ್ತು ಸಮುದ್ರ ಸಂಗಮವಾಗುವ ಅಳಿವೆ ಬಾಗಿಲಿನಲ್ಲಿ ದೋಣಿ ಸಾಗುತ್ತಿದ್ದಾಗ, ಅಲೆಗಳ ಅಬ್ಬರಕ್ಕೆ ಸಿಲುಕಿ ಅಕಸ್ಮಿಕವಾಗಿ ಪಲ್ಟಿಯಾಗಿದೆ.
ಕ್ಷಣಾರ್ಧದಲ್ಲಿ ದೋಣಿಯಲ್ಲಿದ್ದ 14 ಮಂದಿ ನೀರಿಗೆ ಬಿದ್ದಿದ್ದು, ಈ ಪೈಕಿ ಹೆಚ್ಚಿನವರು ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯ ಮೀನುಗಾರರು ಮತ್ತು ಸಮೀಪದ ಇತರ ದೋಣಿ ಚಾಲಕರು ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ದಡಕ್ಕೆ ಸೇರಿಸಿದ್ದಾರೆ. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ನಾಲ್ವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



































