
ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ವಿಳಂಬವನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ವಿಶೇಷ ಪ್ರತಿಭಟನೆ ಆಯೋಜಿಸಲಾಗಿದೆ. ಈ ಬಗ್ಗೆ ಸಮಿತಿಯ ಪ್ರಧಾನ ಸಂಚಾಲಕ ಅಮೃತ್ ಶೆಣೈ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 1ರಂದು ನಡೆಯಲಿರುವ ಈ ಪ್ರತಿಭಟನೆಯನ್ನು “ಏಪ್ರಿಲ್ ಫೂಲ್” ದಿನದೊಂದಿಗೆ ಸಂಯೋಜಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ನಾಯಕರು ಜನರನ್ನು ವರ್ಷಗಳಿಂದ “ಮೂರ್ಖ” ಮಾಡುತ್ತಿದ್ದಾರೆ ಎಂಬ ಸಂದೇಶವನ್ನು ಹಂಚಲು ಉದ್ದೇಶಿಸಲಾಗಿದೆ.
ಕಳೆದ 9 ವರ್ಷಗಳಿಂದ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ, ರೈಲ್ವೇ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಸ್ಥಳೀಯ ಸಂಸದರು ಶೋಭಾ ಕರಂದ್ಲಾಜೆ ಮತ್ತು ಕೋಟ ಶ್ರೀನಿವಾಸ ಪೂಜಾರಿ ಇದಕ್ಕೆ ಯಾವುದೇ ಸಮರ್ಪಕ ಕಾರಣವನ್ನು ನೀಡದೆ, ಕಾಮಗಾರಿಯ ದಿನಾಂಕವನ್ನು ಮುಂದೂಡುತ್ತಲೇ ಇದ್ದಾರೆ. ಇದರಿಂದಾಗಿ ಸ್ಥಳೀಯರು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ವಿಳಂಬವನ್ನು ಖಂಡಿಸಲು ಸಮಿತಿಯು ಏಪ್ರಿಲ್ 1ರಂದು ವಿಶೇಷ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಪ್ರತಿಭಟನೆಯ ಭಾಗವಾಗಿ, ಮಧ್ಯಾಹ್ನ 2:30ಗಂಟೆಗೆ ಕಲ್ಸಂಕದಿಂದ ಇಂದ್ರಾಳಿವರೆಗೆ ಸೇತುವೆಯ ಮಾದರಿಯ ಟ್ಯಾಬ್ಲೋದೊಂದಿಗೆ ಬೃಹತ್ ಜಾಥಾ ಆಯೋಜಿಸಲಾಗಿದೆ. ಸಮಿತಿಯ ಸದಸ್ಯರು ಕಾಮಗಾರಿ ಪೂರ್ಣಗೊಳಿಸಲು ಹಣದ ಕೊರತೆಯಾಗಿದ್ದರೆ, ಜನರಿಂದ ನಿಧಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲು ಸಿದ್ಧರಿದ್ದಾರೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೀರ್ತಿ ಶೆಟ್ಟಿ ಅಂಬಲಪಾಡಿ, ಉಪಾಧ್ಯಕ್ಷರು ಮಹಾಬಲ ಕುಂದರ್, ಕುಶಾಲ್ ಶೆಟ್ಟಿ, ಹರಿಪ್ರಸಾದ್ ರೈ, ಮತ್ತು ಸದಸ್ಯರು ಅನ್ಸಾರ್ ಅಹಮದ್, ಮೀನಾ ಬನ್ನಂಜೆ, ಅಬ್ದುಲ್ ಅಜೀಝ್ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.