
ಉಡುಪಿ: ಮೊದಲ ಪತ್ನಿಗೆ ತಿಳಿಯದಂತೆ ಎರಡನೇ ಮದುವೆ ಮಾಡಿಕೊಂಡು ದುಬೈಗೆ ಹಾರಿ, ಮೊಬೈಲ್ ಕರೆಯಲ್ಲಿ “ತಲಾಖ್ ತಲಾಖ್ ತಲಾಖ್” ಎಂದು ಘೋಷಿಸಿದ ಪತಿಯ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
2013ರಲ್ಲಿ ಮಂಗಳೂರಿನ ಬೋಳಾರಿನ ಶಾದಿ ಮಹಲ್ನಲ್ಲಿ ಇಸ್ಲಾಮಿಕ್ ಷರಿಯತ್ ಪ್ರಕಾರ ಆದಿಲ್ ಇಬ್ರಾಹಿಂ ಮತ್ತು ಅಮ್ರಿನ್ ಜೋಡಿ ಮದುವೆಯಾಗಿತ್ತು. ಮದುವೆಯ ಸಮಯದಲ್ಲಿ ವಧುವಿನ ಕುಟುಂಬವು 60 ಪವನ್ (ಸುಮಾರು 700 ಗ್ರಾಂ) ಚಿನ್ನ, ಗೃಹೋಪಯೋಗಿ ಸಾಮಗ್ರಿಗಳನ್ನು ವರದಕ್ಷಿಣೆಯಾಗಿ ನೀಡಿತ್ತು. ಹಾಗೆಯೇ, 10 ಪವನ್ (ಸುಮಾರು 116 ಗ್ರಾಂ) ಚಿನ್ನದ ಉಡುಗೊರೆ ಮತ್ತು 8 ಲಕ್ಷ ರೂಪಾಯಿಗಳನ್ನು ಮದುವೆ ಖರ್ಚಿಗಾಗಿ ವಧುವಿನ ತಂದೆ ಖರ್ಚು ಮಾಡಿದ್ದರು.
ಮದುವೆಯ ನಂತರ, ಆದಿಲ್ ಸಾಲ ತೀರಿಸಲು ಚಿನ್ನ ಬೇಕೆಂದು ಕೇಳಿದಾಗ, ಅಮ್ರಿನ್ 10 ಪವನ್ ಚಿನ್ನವನ್ನು ನೀಡಿದ್ದಳು. ಕೆಲವು ತಿಂಗಳ ನಂತರ ಮತ್ತೊಂದು 10 ಪವನ್ ಚಿನ್ನದ ಹಾರವನ್ನು ಅಡವಿಟ್ಟು ಹಣ ಪಡೆದರು. ನಂತರ, 40 ಗ್ರಾಂ ಚಿನ್ನ ಮತ್ತು 2.5 ಲಕ್ಷ ರೂಪಾಯಿಗಳನ್ನು ಮೋಸದಿಂದ ಪಡೆದು ಹಿಂತಿರುಗಿಸಲಿಲ್ಲ. 8 ತಿಂಗಳ ನಂತರ, ಆದಿಲ್ ಅಮ್ರಿನ್ ಅಕ್ಕನ 120 ಗ್ರಾಂ ಚಿನ್ನವನ್ನು ಅಡವಿಟ್ಟು ಬ್ರಹ್ಮಾವರದ ಮೀನಾ ಅನ್ ಮೋಲ್ ನಲ್ಲಿ ಮನೆ ಖರೀದಿಸಿದರು.
ಇದಲ್ಲದೇ, ಅಮ್ರಿನ್ ಗಮನಿಸದಂತೆ 2025ರ ಜೂನ್ 3ರಂದು ಆದಿಲ್ ಎರಡನೇ ಮದುವೆ ಮಾಡಿಕೊಂಡು, ಜೂನ್ 4ರಂದು ಹೊಸ ಪತ್ನಿಯೊಂದಿಗೆ ದುಬೈಗೆ ತೆರಳಿದ್ದರು. ಇದನ್ನು ತಿಳಿದ ಅಮ್ರಿನ್ ಪತಿಗೆ ಕರೆ ಮಾಡಿದಾಗ, ಆದಿಲ್ ತಾನು ಎರಡನೇ ಮದುವೆ ಮಾಡಿಕೊಂಡಿದ್ದಾಗಿ ಹೇಳಿ, “ತಲಾಖ್ ತಲಾಖ್ ತಲಾಖ್” ಎಂದು ಮೂರು ಬಾರಿ ಘೋಷಿಸಿದ್ದಾರೆ. ಇದರ ನಂತರ ಅಮ್ರಿನ್ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.