
ಉಡುಪಿ, ಮೇ 27 – ಉಡುಪಿ ಹಾಗೂ ಕಾಪು ತಾಲೂಕುಗಳಲ್ಲಿ ಗ್ರಾಮ ಪಂಚಾಯತ್ ಉಪಚುನಾವಣೆಗೆ ಸಂಬಂಧಿಸಿದಂತೆ ಮೇ 28ರಂದು ನಡೆಯಲಿರುವ ಮತ ಎಣಿಕೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾಗಿರುವ ಡಾ. ಕೆ. ವಿದ್ಯಾಕುಮಾರಿ ಅವರು ನಿಷೇಧಾಜ್ಞೆ ವಿಧಿಸಿರುವುದಾಗಿ ಪ್ರಕಟಣೆ ತಿಳಿಸಿದೆ.
ಮತ ಎಣಿಕೆ ನಡೆಯಲಿರುವ ಉಡುಪಿ ಹಾಗೂ ಕಾಪು ತಾಲೂಕು ಕಚೇರಿಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮೇ 28ರ ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವವರೆಗೆ ನಿಷೇಧಾಜ್ಞೆ ಜಾರಿಗೆ ಬರಲಿದೆ.
ನಿಷೇಧದ ಪ್ರಮುಖ ಅಂಶಗಳು:
- ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕೂ ಹೆಚ್ಚು ಮಂದಿ ಗುಂಪು ಸೇರುವುದು, ಮೆರವಣಿಗೆ, ಸಭೆ, ಶೋಷಣೆ ಕೂಗುವುದು ನಿಷಿದ್ಧ.
- ಮತ ಎಣಿಕೆ ಕೇಂದ್ರದ 100 ಮೀಟರ್ ಒಳಗೆ ಮೊಬೈಲ್, ಕಾರ್ಡ್ಲೆಸ್, ಇತರ ಎಲೆಕ್ಟ್ರಾನಿಕ್ ಸಾಧನಗಳ ನಿಷೇಧ.
- ಧ್ವನಿವರ್ಧಕ ಬಳಕೆ, ಪಟಾಕಿ ಸಿಡಿಸುವುದು, ವಿಜಯೋತ್ಸವ ಅಥವಾ ಕರಾಳೋತ್ಸವ ಆಚರಣೆ ನಿಷೇಧ.
- ಮಾರಕಾಸ್ತ್ರ, ಸ್ಫೋಟಕ ವಸ್ತುಗಳು, ಆಯುಧಗಳನ್ನು ಬಳಸುವುದು ನಿಷಿದ್ಧ – ಇದು ಕಂಡುಬಂದರೆ ಪೊಲೀಸರ ವಶಕ್ಕೆ.
- ಉಗ್ರ ಭಾಷಣ, ತೇಜೋವಧೆ ಮಾಡುವ ಚಿತ್ರ-ಪ್ರತಿಕೃತಿಗಳ ಪ್ರದರ್ಶನ, ಶಾಂತಿಗೆ ಭಂಗ ತರಬಹುದಾದ ಯಾವುದೇ ಕೃತ್ಯಗಳಿಗೆ ಕಟ್ಟೆಚ್ಚರ.
ಈ ನಿಷೇಧಾಜ್ಞೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 ರ ಪ್ರಕಾರ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಸ್ಪಷ್ಟಪಡಿಸಿದೆ.