
ಉಡುಪಿ: ಉಡುಪಿ ನಗರಸಭೆಯು ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ನಗರದ 35 ವಾರ್ಡ್ಗಳಲ್ಲಿನ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯಗಳು, ತೆಂಗಿನ ಮಡಲು, ಗಿಡಗಂಟಿ ಮತ್ತು ಗಾರ್ಡನ್ ತ್ಯಾಜ್ಯಗಳನ್ನು ರಸ್ತೆ ಬದಿಗೆ, ಮಳೆ ನೀರು ಹರಿಯುವ ತೋಡು ಅಥವಾ ಚರಂಡಿಗೆ ಎಸೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ನಗರಸಭೆ ತಿಳಿಸಿದೆ.
ಈ ರೀತಿಯ ಅಕ್ರಮ ತ್ಯಾಜ್ಯ ವಿಲೇವಾರಿಯಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದ್ದು, ರಸ್ತೆ ಬದಿಗೆ ಹಾಕಿರುವ ತೆಂಗಿನ ಮಡಲುಗಳಿಂದ ಘನತ್ಯಾಜ್ಯ ವಿಲೇವಾರಿಗೂ ಅಡ್ಡಿಯಾಗುತ್ತಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ತೆಂಗಿನ ಮಡಲು ಮತ್ತು ಇತರೆ ತ್ಯಾಜ್ಯವನ್ನು ಎಸೆಯುವುದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಎಂದು ನಗರಸಭೆ ಎಚ್ಚರಿಸಿದೆ. ಆದ್ದರಿಂದ, ನಾಗರಿಕರು ಮೇಲ್ಕಂಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರ ಕಚೇರಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.