
ಬೆಂಗಳೂರು : ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 14,000ಕ್ಕೂ ಹೆಚ್ಚು ಮಕ್ಕಳು ಅಪಹರಣಕ್ಕೊಳಗಾಗಿದ್ದು, ಈ ಪೈಕಿ 1,336 ಮಕ್ಕಳ ಪ್ರಕರಣಗಳು ಇನ್ನೂ ನಿಗೂಢವಾಗಿ ಉಳಿದಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನ ಪರಿಷತ್ನಲ್ಲಿ ತಿಳಿಸಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ, ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವುದು ಆತಂಕ ಮೂಡಿಸಿದೆ.
ಹೆಚ್ಚಾಗಿ ನಾಪತ್ತೆಯಾಗಿದ್ದು ಹೆಣ್ಣು ಮಕ್ಕಳು
ಮಕ್ಕಳ ಅಪಹರಣವು ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಈ ವರ್ಷ ಜುಲೈ ಅಂತ್ಯದ ವೇಳೆಗೆ ಮಾತ್ರ 2,170 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಪೈಕಿ ಕಿಡ್ನಾಪ್ ಮತ್ತು ನಿಗೂಢವಾಗಿ ಕಾಣೆಯಾದವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕಳೆದ ಐದು ವರ್ಷದಲ್ಲಿ ಒಟ್ಟು 14,878 ಮಕ್ಕಳು ನಾಪತ್ತೆಯಾಗಿದ್ದು, ಇವರಲ್ಲಿ 13,542 ಮಕ್ಕಳು ಪತ್ತೆಯಾಗಿದ್ದಾರೆ. ಆದರೆ, 1,336 ಮಕ್ಕಳು ಇನ್ನೂ ಪತ್ತೆಯಾಗಿಲ್ಲ.
- ನಾಪತ್ತೆಯಾದ 10,792 ಹೆಣ್ಣು ಮಕ್ಕಳ ಪೈಕಿ 1,003 ಮಂದಿ.
- 4,086 ಗಂಡು ಮಕ್ಕಳ ಪೈಕಿ 333 ಮಕ್ಕಳು ಇನ್ನೂ ಪತ್ತೆಯಾಗಿಲ್ಲ.
ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಐದು ವರ್ಷದಲ್ಲಿ 634 ಅಪಹರಣಕಾರರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಮಕ್ಕಳ ನಾಪತ್ತೆಗೆ ಕಾರಣಗಳು
ಮಕ್ಕಳ ಅಪಹರಣಕ್ಕೆ ಹಲವು ಕಾರಣಗಳಿರುವ ಬಗ್ಗೆ ತನಿಖೆ ವೇಳೆ ತಿಳಿದುಬಂದಿದೆ.
- ಬಾಲ ಕಾರ್ಮಿಕರನ್ನಾಗಿ ದುಡಿಸುವುದು.
- ಹಣದಾಸೆ ತೋರಿಸಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುವುದು.
- ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಪ್ರೀತಿ-ಪ್ರೇಮದ ಕಾರಣಕ್ಕೆ ಓಡಿ ಹೋಗುವುದು.
- ಅಂಗಾಂಗ ಮಾರಾಟ ದಂಧೆ.
- ಭಿಕ್ಷಾಟನೆಯಲ್ಲಿ ತೊಡಗಿಸುವುದು.