
ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026-27ನೇ ಸಾಲಿನ ಬಜೆಟ್ ಕೇವಲ ಆಯವ್ಯಯದ ಪಟ್ಟಿಯಲ್ಲ, ಬದಲಾಗಿ 2047ರ ಹೊತ್ತಿಗೆ ಭಾರತವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿ ನಿಲ್ಲಿಸುವ ‘ವಿಕಸಿತ ಭಾರತ’ದ ಬಲಿಷ್ಠ ಅಡಿಪಾಯವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವಿಶ್ಲೇಷಿಸಿದ್ದಾರೆ.
ಉಡುಪಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ 53.5 ಲಕ್ಷ ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಜಗತ್ತಿನಾದ್ಯಂತ ಆರ್ಥಿಕ ಅಸ್ಥಿರತೆ ಕಾಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ದೇಶದ ಜನರಲ್ಲಿ ಆರ್ಥಿಕ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ವಸ್ಪರ್ಶಿ ಅಭಿವೃದ್ಧಿಯ ದೂರದೃಷ್ಟಿ: ಈ ಬಜೆಟ್ ಯಾವುದೇ ಒಂದು ವರ್ಗ ಅಥವಾ ಸಮುದಾಯದ ಓಲೈಕೆಗೆ ಸೀಮಿತವಾಗದೆ, ರಾಷ್ಟ್ರದ ದೀರ್ಘಕಾಲದ ಹಿತದೃಷ್ಟಿಯನ್ನು ಹೊಂದಿದೆ. ವಿಶೇಷವಾಗಿ ಮೂಲಭೂತ ಸೌಕರ್ಯ, ಕೃಷಿ ಆಧುನೀಕರಣ, ಸೆಮಿ ಕಂಡಕ್ಟರ್ ಉತ್ಪಾದನೆ ಮತ್ತು ಡೇಟಾ ಸೆಂಟರ್ಗಳ ಸ್ಥಾಪನೆಯ ಮೂಲಕ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ಪಾದನಾ ವಲಯ ಮತ್ತು ಸೇವಾ ಕ್ಷೇತ್ರಗಳಿಗೆ ನೀಡಿರುವ ಹೆಚ್ಚಿನ ಆದ್ಯತೆಯು ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ ಎಂದು ಕಾರ್ಣಿಕ್ ವಿವರಿಸಿದರು.
ರಕ್ಷಣೆ ಮತ್ತು ತಂತ್ರಜ್ಞಾನಕ್ಕೆ ಬಲ: ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ರಕ್ಷಣಾ ಇಲಾಖೆಗೆ ದಾಖಲೆಯ 7.84 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಸರ್ಕಾರದ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ. ಎ.ಐ. ಮಿಷನ್ (ಕೃತಕ ಬುದ್ಧಿಮತ್ತೆ), ಬಯೋ ಫಾರ್ಮಾ ಮತ್ತು ನಿಮ್ಹಾನ್ಸ್ನಂತಹ ಸಂಸ್ಥೆಗಳ ಆಧುನೀಕರಣಕ್ಕೆ ಒತ್ತು ನೀಡುವ ಮೂಲಕ ತಾಂತ್ರಿಕ ಕ್ರಾಂತಿಗೆ ನಾಂದಿ ಹಾಡಲಾಗಿದೆ. ಅಲ್ಲದೆ, ಗತಿ ಶಕ್ತಿ ಯೋಜನೆಯಡಿ 7 ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಘೋಷಿಸಿರುವುದು ಆರ್ಥಿಕ ಪ್ರಗತಿಯ ವೇಗವನ್ನು ಹೆಚ್ಚಿಸಲಿದೆ.
ಆರೋಗ್ಯ ಮತ್ತು ಪ್ರವಾಸೋದ್ಯಮದ ಹಬ್: ದೇಶದಾದ್ಯಂತ ಪ್ರಾದೇಶಿಕ ವೈದ್ಯಕೀಯ ಹಬ್ಗಳನ್ನು ಸ್ಥಾಪಿಸುವ ಮೂಲಕ ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಲಾಗಿದೆ. ಇದು 140 ಕೋಟಿ ಭಾರತೀಯರ ಕನಸುಗಳನ್ನು ಸಾಕಾರಗೊಳಿಸುವ ‘ಬ್ಲೂ ಪ್ರಿಂಟ್’ ಆಗಿದೆ ಎಂದು ಅವರು ಬಣ್ಣಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ದಿವಾಕರ ಶೆಟ್ಟಿ ಕಾಪು ಹಾಗೂ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.



































