
ಉಡುಪಿ: ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕುಂಜಿಬೆಟ್ಟು ಮಾಂಡವಿ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು. ಮೋರ್ಚಾದ ಅಧ್ಯಕ್ಷೆ ನೀತಾ ಪ್ರಭು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಡಾ. ರಾಜಲಕ್ಷ್ಮಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಸಾಧಕರಿಗೆ ಗೌರವ: ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಶಕುಂತಲಾ ಶೆಟ್ಟಿ (ಹೈನುಗಾರಿಕೆ), ವಿಮಲ (ಸಂಜೀವಿನಿ ಗ್ರೂಪ್), ಅನುಷಾ (ವಕೀಲರು), ಸುಶೀಲ ಸಾಲಿಯಾನ್ (ಮಹಿಳಾ ಹೋಮ್ ಗಾರ್ಡ್), ಗೀತಾ ಕೃಷ್ಣರಾಜ್ (ಆಟೋ ಚಾಲಕಿ), ಹಾಗೂ ಲಲಿತ (ಪೌರ ಕಾರ್ಮಿಕರು) ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ ಮತ್ತು ಸತೀಶ್ ಸಾಲಿಯಾನ್ ಅವರಿಗೂ ಗೌರವ ಸಲ್ಲಿಸಲಾಯಿತು. ವಿಶೇಷವಾಗಿ ಪರ್ಕಳದ ‘ಮನೆ ಊಟ’ ಹೋಟೆಲ್ನ ಹಿರಿಯ ದಂಪತಿಗಳಾದ ಗೋಪಾಲಕೃಷ್ಣ ಮತ್ತು ವಸಂತಿ ಅವರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ಹೈಲೈಟ್ ಆಗಿತ್ತು.

ಆರೋಗ್ಯ ಮತ್ತು ಮನೋರಂಜನೆ: ವಾತ್ಸಲ್ಯ ಕ್ಲಿನಿಕ್ನ ಡಾ. ರಾಜಲಕ್ಷ್ಮಿ ಅವರು ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ಮನೋರಂಜನಾ ಕಾರ್ಯಕ್ರಮದ ಭಾಗವಾಗಿ ನಡೆದ ‘ನಾರೀ ಶಕ್ತಿ’ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸೇರಿದಂತೆ ಪ್ರಮುಖ ನಾಯಕರು ಮತ್ತು ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.




































