
ಉಡುಪಿ: ಬ್ರಾಹ್ಮಣ ಮಹಾಸಭಾದ ವತಿಯಿಂದ ಉಡುಪಿ ತಾಲೂಕು ವ್ಯಾಪ್ತಿಯ ವಿವಿಧ ಬ್ರಾಹ್ಮಣ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ “ಆಟಿಡೊಂಜಿ ವಿಪ್ರಕೂಟ” ಕಾರ್ಯಕ್ರಮವು ನಗರದ ಕನ್ನರ್ಪಾಡಿಯ ಶ್ರೀದೇವಿ ಸಭಾ ಭವನದಲ್ಲಿ ಆಗಸ್ಟ್ 15 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣದೊಂದಿಗೆ ಆರಂಭವಾದ ಈ ಸಮಾರಂಭವು, ಆಟಿ ಮಾಸದ ವಿಶೇಷತೆಗಳನ್ನು ಮತ್ತು ಬ್ರಾಹ್ಮಣ ಸಂಘಟನೆಯ ಮಹತ್ವವನ್ನು ಸಾರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಹೆ ಉಡುಪಿಯ ಶರತ್ ಕೆ ರಾವ್, ಉಡುಪಿಯ ಮಾಜಿ ಶಾಸಕ ಕೆ ರಘುಪತಿ ಭಟ್, ಶ್ರೀದೇವಿ ಸಭಾಭವನದ ಮಾಲೀಕರಾದ ರಮೇಶ್ ಬೀಡು, ನಗರಸಭಾ ಸದಸ್ಯ ಕೃಷ್ಣರಾವ್ ಕೊಡಂಚ ಮತ್ತು ಖ್ಯಾತ ಚಲನಚಿತ್ರ ನಟಿ ರಾಧಿಕಾ ನಾರಾಯಣ್ (ರಂಗಿತರಂಗ ಖ್ಯಾತಿ) ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ವಾನ್ ಹರಿದಾಸ ಭಟ್, ಆಟಿ ಮಾಸದ ಸಾಂಪ್ರದಾಯಿಕ ಮಹತ್ವ ಮತ್ತು ಹಬ್ಬಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಜೊತೆಗೆ ಬ್ರಾಹ್ಮಣ ಸಮುದಾಯದ ಏಕತೆ ಮತ್ತು ಸಂಘಟನೆಯ ಆವಶ್ಯಕತೆಗಳ ಬಗ್ಗೆ ವಿವರಿಸಿದರು.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀಕಾಂತ್ ಉಪಾಧ್ಯ ಕೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಪ್ರಧಾನ ಕಾರ್ಯದರ್ಶಿ ಕೆ. ದುರ್ಗಾಪ್ರಸಾದ್ ಭಾರ್ಗವ್ ನೆರವೇರಿಸಿದರು. ಈ ಬೃಹತ್ ಕೂಟದಲ್ಲಿ ಉಡುಪಿ ತಾಲೂಕಿನ 26 ವಿಪ್ರ ವಲಯಗಳು ಮತ್ತು 7 ವಿವಿಧ ಬ್ರಾಹ್ಮಣ ಸಂಘಗಳ ಸುಮಾರು 1,000 ಜನರು ಭಾಗವಹಿಸಿದ್ದರು.
ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಿ ಮಾಸದ ಸಾಂಪ್ರದಾಯಿಕ ವಿಶೇಷ ಭಕ್ಷ್ಯಗಳ ಭೋಜನ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕೋಶಾಧಿಕಾರಿ ಹಯವದನ ಭಟ್ ಧನ್ಯವಾದ ಅರ್ಪಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಕಾರ್ಯಕ್ರಮವು ಬ್ರಾಹ್ಮಣ ಸಮುದಾಯದ ಸಂಘಟನೆ, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸುವ ಪ್ರಯತ್ನಕ್ಕೆ ಉತ್ತಮ ವೇದಿಕೆಯಾಗಿದೆ.