
ಮಕ್ಕಳಿಗೆ ನಮ್ಮ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ, ಆನಂದತೀರ್ಥ ವಿದ್ಯಾಲಯದ ಪೂರ್ವ ಪ್ರಾಥಮಿಕ ವಿಭಾಗವು ಜನವರಿ 20ರಂದು ಶಾಲಾ ಆವರಣದಲ್ಲಿ ಉಡುಪಿ ಪರ್ಯಾಯ ಸಂಪ್ರದಾಯ ಹಾಗೂ ವೈಭವವನ್ನು ಅತ್ಯಂತ ಸೊಗಸಾಗಿ ಮೂಡಿಸಿತು.
ಭವ್ಯ ಮೆರವಣಿಗೆ ಆನಂದತೀರ್ಥ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡು, ಮಕ್ಕಳು ಕುಣಿತ ಭಜನೆ, ಭರತನಾಟ್ಯ, ಭಜನೆ ಗಾಯನ, ಹುಲಿ ವೇಷ, ಚೆಂಡೆ ಹಾಗೂ ಪಲ್ಲಕ್ಕಿ ಪ್ರದರ್ಶನಗಳ ಮೂಲಕ ಪಾರಂಪರಿಕ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿದರು. ಕಲಶವನ್ನು ಹೊತ್ತು ಹೆಜ್ಜೆ ಹಾಕಿದ ಪುಟ್ಟ ಬಾಲಕಿಯರು ಮೆರವಣಿಗೆಗೆ ವಿಶೇಷ ಶೋಭೆ ನೀಡಿದರು.
ಮೆರವಣಿಗೆ ಶಾಲಾ ಪ್ರವೇಶದ್ವಾರ ತಲುಪುತ್ತಿದ್ದಂತೆ, ಶ್ರೀ ಕೃಷ್ಣ ಮಠದ ಮುಖ್ಯ ದ್ವಾರ ಹಾಗೂ ಕನಕನ ಕಿಂಡಿಯನ್ನು ಸ್ಮರಿಸುವಂತೆ ಸಜ್ಜುಗೊಂಡ ಪ್ರವೇಶದ್ವಾರವು ಎಲ್ಲರ ಮನ ಸೆಳೆಯುವ ದೃಶ್ಯವಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಅಷ್ಟಮಠದ ಪುಟ್ಟ ಯತಿಗಳು ಕಾಣಿಸಿಕೊಂಡರು. ಅಷ್ಟಮಠ ಯತಿಗಳ ವೇಷಧಾರಿಗಳಾಗಿ ಮಕ್ಕಳು ಪರ್ಯಾಯ ವಿಧಿವಿಧಾನಗಳನ್ನು ಭಕ್ತಿಭಾವದಿಂದ ನೆರವೇರಿಸಿ, ಬಳಿಕ ಮಂತ್ರಾಕ್ಷತೆ ಹಾಗೂ ಫಲಗಳನ್ನು ನೀಡಿ ಎಲ್ಲರಿಗೂ ಆಶೀರ್ವಾದ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳು, ಶ್ರೀ ಶ್ರೀಹರಿ ಭಟ್ (ಉಪಾಧ್ಯಕ್ಷರು), ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯಾ (ಖಜಾಂಚಿ), ಶ್ರೀ ಮಧ್ವರಾಜ ಭಟ್ , ಡಾ. ಗೀತಾ ಶಶಿಧರ್ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಈ ಭವ್ಯ ಕಾರ್ಯಕ್ರಮವನ್ನು ಕಂಡು, ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಪೂರ್ವ ಪ್ರಾಥಮಿಕ ಶಿಕ್ಷಕರ ಪರಿಶ್ರಮವನ್ನು ಮೆಚ್ಚಿ ಗುಣಗಾನ ಮಾಡಿದರು.



































