
ಉಡುಪಿ: ಮಲ್ಪೆ ಕೊಡವೂರು ಪ್ರದೇಶದ ಸಾಲ್ಮರದಲ್ಲಿ ನಡೆದಿರುವ ಎಕೆಎಂಎಸ್ (AKMS) ಖಾಸಗಿ ಬಸ್ ಸಂಸ್ಥೆಯ ಮಾಲೀಕ ಸೈಫ್ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಿಷನ್ ಕಾಂಪೌಂಡ್ ನಿವಾಸಿ ಮಹಮದ್ ಫೈಸಲ್ ಖಾನ್ (27), ಕರಂಬಳ್ಳಿ ಕುಂಜಿಬೆಟ್ಟು ನಿವಾಸಿ ಮೊಹಮ್ಮದ್ ಶರೀಫ್ (37) ಮತ್ತು ಕಾಟಿಪಳ್ಳದ ಅಬ್ದುಲ್ ಶುಕುರ್ (43) ಬಂಧಿತ ಆರೋಪಿಗಳು. ಸೈಫ್ ಅವರ ಬಸ್ ಕಂಪನಿಯಲ್ಲೇ ಈ ಮೂವರು ಕೆಲಸ ಮಾಡುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿಯಿದೆ. ಈ ಕೃತ್ಯದ ಹಿಂದಿನ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.
ಈ ಮಹತ್ವದ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಡಿ.ಟಿ. ಪ್ರಭು ಅವರ ಮಾರ್ಗದರ್ಶನದಲ್ಲಿ, ಮಲ್ಪೆ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತೀವ್ರ ಕಾರ್ಯಾಚರಣೆಯ ನಂತರ ತಂಡವು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೊಲೆಯ ಹಿಂದಿರುವ ಪೂರ್ಣ ಜಾಲ ಮತ್ತು ಯಾವುದೇ ಇತರ ವ್ಯಕ್ತಿಗಳ ಪಾತ್ರವಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆಯನ್ನು ಮುಂದುವರೆಸಿದ್ದಾರೆ.