
ತುಮಕೂರು: ಜನ್ಮ ನೀಡಿದ ತಾಯಿಯನ್ನೇ ಮಗಳು ಬರ್ಬರವಾಗಿ ಹತ್ಯೆ ಮಾಡಿ, ಹೃದಯಾಘಾತದ ನಾಟಕವಾಡಿದ ಸಿನಿಮೀಯ ಘಟನೆಯೊಂದು ಜಿಲ್ಲೆಯಲ್ಲಿ ಬಯಲಾಗಿದೆ. ನಗರದ ಶ್ರೀನಗರದ ನಿವಾಸಿ ಪುಷ್ಪಲತಾ (55) ಎಂಬುವವರೇ ಮಗಳ ಕ್ರೌರ್ಯಕ್ಕೆ ಬಲಿಯಾದ ದುರ್ದೈವಿ. ಫೆಬ್ರವರಿ 11 ರಂದು ನಡೆದಿದ್ದ ಈ ನಿಗೂಢ ಸಾವನ್ನು ಸಹಜ ಸಾವು ಎಂದು ಬಿಂಬಿಸಲು ಮಗಳು ಸುಚಿತ್ರಾ ಪ್ರಯತ್ನಿಸಿದ್ದಳಾದರೂ, ಪೊಲೀಸರ ಚಾಣಾಕ್ಷ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ.
ಘಟನೆಯ ಹಿನ್ನೆಲೆಯು ಜ್ಯೋತಿಷ್ಯದ ಅಂಧಶ್ರದ್ಧೆ ಹಾಗೂ ಹಣದ ವ್ಯಾಮೋಹದ ಸುತ್ತ ಸುತ್ತುತ್ತಿದೆ. ಒಂದು ವರ್ಷದ ಹಿಂದೆ ತಂದೆ ಬಾಬು ನಾಯಕ್ ಸಾವನ್ನಪ್ಪಿದ ನಂತರ, ಸುಚಿತ್ರಾ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದಳು. “ನಿನ್ನ ತಂದೆಯ ಸಾವಿಗೆ ತಾಯಿಯ ಮಾಟಮಂತ್ರವೇ ಕಾರಣ, ಮುಂದಿನ ದಿನಗಳಲ್ಲಿ ನಿನಗೂ ಅವರಿಂದ ಪ್ರಾಣಾಪಾಯವಿದೆ” ಎಂದು ಜ್ಯೋತಿಷಿ ಹೇಳಿದ ಮಾತು ಸುಚಿತ್ರಾಳ ತಲೆಯಲ್ಲಿ ವಿಷ ಬಿತ್ತಿತ್ತು ಎನ್ನಲಾಗಿದೆ. ಇದೇ ದ್ವೇಷದಲ್ಲಿ ಫೆಬ್ರವರಿ 11ರ ರಾತ್ರಿ ಮಲಗಿದ್ದ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಸುಚಿತ್ರಾ ಕೊಲೆ ಮಾಡಿದ್ದಾಳೆ. ಈ ಕೃತ್ಯಕ್ಕೆ ಆಕೆಯ ಪತಿ ಸುರೇಶ್ ಕೂಡ ಪರೋಕ್ಷವಾಗಿ ಸಾಥ್ ನೀಡಿದ್ದು, ಇಬ್ಬರನ್ನೂ ಈಗ ಕ್ಯಾತಸಂದ್ರ ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.
ಕೇವಲ ಮೂಢನಂಬಿಕೆ ಮಾತ್ರವಲ್ಲದೆ, ಆಸ್ತಿ ಮತ್ತು ಹಣದ ವಿವಾದವೂ ಈ ಕೊಲೆಗೆ ಪ್ರೇರಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಜಾಗ ಮಾರಾಟ ಮಾಡಿ ಬಂದಿದ್ದ ಲಕ್ಷಾಂತರ ರೂಪಾಯಿ ಹಣ ಪುಷ್ಪಲತಾ ಅವರ ಬಳಿಯೇ ಇತ್ತು. ಈ ಹಣಕ್ಕಾಗಿ ತಾಯಿ-ಮಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಹತ್ಯೆಯ ನಂತರ ಶವವನ್ನು ತರಾತುರಿಯಲ್ಲಿ ಅನುಪನಹಳ್ಳಿಯ ಸಂಬಂಧಿಕರ ಮನೆಗೆ ಸಾಗಿಸಿ ಅಂತ್ಯಕ್ರಿಯೆ ಮಾಡಲು ಸುಚಿತ್ರಾ ಸಜ್ಜಾಗಿದ್ದಳು. ಆದರೆ, ತಾಯಿಯ ಮುಖದ ಮೇಲಿದ್ದ ರಕ್ತದ ಕಲೆಗಳು ಮತ್ತು ಸ್ಥಳೀಯರ ಅನುಮಾನದಿಂದಾಗಿ ಪೊಲೀಸರು ಮಧ್ಯಪ್ರವೇಶಿಸಿ ಶವಪರೀಕ್ಷೆ ನಡೆಸಿದಾಗ ಕತ್ತು ಹಿಸುಕಿ ಸಾಯಿಸಿರುವುದು ದೃಢಪಟ್ಟಿದೆ. ಸದ್ಯ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜ್ಯೋತಿಷಿಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.



































