
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಗೆ ರಾಜ್ಯಭಾಷಾ ಮಾನ್ಯತೆ ನೀಡಬೇಕೆಂಬ ಹೋರಾಟ ಬಿಗಿಗೊಂಡಿದ್ದ ಸಂದರ್ಭದಲ್ಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕರಿಗೆ ದ.ಕ. ಜಿಲ್ಲಾ ಪಂಚಾಯತ್ ಕಳುಹಿಸಿದ ಒಂದು ಪತ್ರ ಚರ್ಚೆಗೆ ಗ್ರಾಸವಾಗಿದೆ.
ಕಾರ್ಕಳದ ನಾಗರೀಕ ಸೇವಾ ಸಂಘದ ಸಂಚಾಲಕ ಮುರಳೀಧರ್ ಅವರು “ಗ್ರಾಮ ಸಭೆಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು” ಎಂಬ ಮನವಿಗೆ ಪ್ರತಿಯಾಗಿ, ಜಿ.ಪಂ. ಸಿಇಒ ಅವರು ತಾ.ಪಂ. ಇಒಗಳಿಗೆ ಪತ್ರ ಕಳಿಸಿ, ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಈ ಪತ್ರವು ತುಳು ಭಾಷೆ ಬಳಕೆ ನಿರ್ಬಂಧಿಸಲಾಗಿದೆ ಎಂಬ ತಪ್ಪು ಅಭಿಪ್ರಾಯ ಮೂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ಸಂವಿಧಾನ ವಿರುದ್ಧವೆಂದು ವಿರೋಧ
ಈ ಹಿನ್ನೆಲೆಯಲ್ಲಿ ತುಳು ಸಮುದಾಯದ ಹಲವು ಮುಖಂಡರು, ಚಿಂತಕರು, ಮತ್ತು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದು, “ಕರಾವಳಿ ಭಾಗದ ಶಾಸಕರು ಹಲವು ಬಾರಿ ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತನಾಡಿದ್ದಾರೆ. ಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಸಹ ತುಳು ಭಾಷೆ ಬಳಸಿದ ಉದಾಹರಣೆಗಳಿವೆ. ಇಂತಹದರಲ್ಲಿ ಗ್ರಾಮ ಸಭೆಗಳಲ್ಲಿ ತುಳು ಬಳಕೆ ವಿರೋಧಿಸುವುದು ಅಸಮಂಜಸ” ಎಂದು ಹೇಳಿದ್ದಾರೆ.
ಡಿವಿಎಸ್ ಪ್ರತಿಕ್ರಿಯೆ
ಸಮಾಜ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿವಿ ಸದಾನಂದ ಗೌಡ, “ತುಳು ಭಾಷೆ ಕನ್ನಡ ನಾಡಿನ ಮಾತೃಭಾಷೆ. ತುಳು ಬಳಕೆಗೆ ನಿರ್ಬಂಧ ಇಟ್ಟರೆ ಉರ್ದು ಭಾಷೆ ಯಾವ ನೈತಿಕತೆಯಿಂದ ಸರಕಾರಿ ದಾಖಲೆಗಳಲ್ಲಿ ಬಳಸಲಾಗುತ್ತದೆ?” ಎಂದು ಪ್ರಶ್ನಿಸಿದ್ದಾರೆ.
ಅಧಿಕೃತ ಸ್ಪಷ್ಟನೆ
ಜಿಲ್ಲಾ ಉಪ ಕಾರ್ಯದರ್ಶಿ ಜಯಲಕ್ಷ್ಮಿ ಸ್ಪಷ್ಟಪಡಿಸಿ, “ತುಳು ಭಾಷೆಗೆ ವಿರೋಧವಾಗುವಂತೆ ಯಾವುದೇ ನೇರ ಆದೇಶ ಜಾರಿ ಮಾಡಿಲ್ಲ. ದೂರಿನ ಪರಿಶೀಲನೆಗಾಗಿ ಆಯಾ ತಾಲೂಕುಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮ ಸಭೆಗಳಲ್ಲಿ ಭಾಷಾ ಬಳಕೆಯ ನಿರ್ಧಾರ ಸ್ಥಳೀಯ ಮಟ್ಟದಲ್ಲೇ ಆಗಬೇಕು” ಎಂದರು.
ತುಳು ಸಾಹಿತ್ಯ ಅಕಾಡೆಮಿ ಪ್ರತಿಕ್ರಿಯೆ
“ಸಾಂಸ್ಕೃತಿಕ ವೈವಿಧ್ಯಕ್ಕೆ ಗೌರವ ಕೊಡುವುದು ಭಾರತೀಯ ಸಂವಿಧಾನದ ತಾತ್ಪರ್ಯ. ವಿವಾದ ಸೃಷ್ಟಿಯಾದ ಜಿ.ಪಂ ಪತ್ರವನ್ನು ವಾಪಸ್ ತೆಗೆದುಕೊಳ್ಳಬೇಕು.”ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.