
ಕಾರ್ಕಳ : ಇತ್ತೀಚೆಗೆ ನಿಧನರಾದ ಕಾರ್ಕಳದ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಜರಗಿತು.
ನುಡಿನಮನ ಸಲ್ಲಿಸಿದ ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಗೋವಿಂದ ರಾವ್ ಅವರು ಕೇವಲ ಗ್ರಂಥಪಾಲಕ ಮಾತ್ರ ಆಗಿರದೇ ಗ್ರಂಥಾಲಯಕ್ಕೆ ಬಂದ ಹಿರಿಯ, ಕಿರಿಯ ಓದುಗರನ್ನು ಪ್ರೋತ್ಸಾಹಿಸುವ ಮತ್ತು ಮಾರ್ಗದರ್ಶನ ಮಾಡುವ ಕೆಲಸವನ್ನು ಮಾಡುತ್ತಿದ್ದರು. ನನ್ನ ಮತ್ತು ನನ್ನಂತಹ ನೂರಾರು ಓದುಗರ ಬಾಲ್ಯ, ಹದಿಹರೆಯ ಮತ್ತು ಯೌವ್ವನಗಳನ್ನು ಪುಸ್ತಕಗಳ ಓದಿನ ಮೂಲಕ ಶ್ರೀಮಂತಗೊಳಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಅದೇ ರೀತಿ ಕಾರ್ಕಳದ ಗಾಂಧಿ ಮೈದಾನದ ವಿಸ್ತಾರವಾದ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಲು ಅವರು ಓದುಗರ ಮೂಲಕ ಕಾರ್ಡ್ ಚಳುವಳಿಯನ್ನು ಮಾಡಿದ್ದು ಪರೋಕ್ಷವಾಗಿ ಕಾರಣ ಆಗಿತ್ತು. ಹಾಗೆಯೇ ಅವಿಭಜಿತ ಕರಾವಳಿ ಜಿಲ್ಲೆಗಳ ಮಟ್ಟದ ಚೆಸ್ ಫೆಡರೇಶನ್ ಸ್ಥಾಪನೆ ಮಾಡಿ ಅಖಿಲಭಾರತ ಮಟ್ಟದ ಚೆಸ್ ಟೂರ್ನಿ ಸಂಘಟನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಮಿತ್ರಪ್ರಭಾ ಹೆಗ್ಡೆ ಅವರು ಮಾತಾಡಿ ನನಗೆ ಮತ್ತು ನನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾಗುವ ನೂರಾರು ಪುಸ್ತಕಗಳನ್ನು ಒದಗಿಸಿ ಅವರು ಮಹದುಪಕಾರ ಮಾಡಿದ್ದಾರೆ ಎಂದರು.
ಅದೇ ರೀತಿ ನಿವೃತ್ತ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತರಾದ ಬಿಪಿನಚಂದ್ರ ಪಾಲ್ ಅವರು ಮಾತಾಡಿ ತನ್ನ ಮತ್ತು ಗೋವಿಂದ ರಾಯರ ದೀರ್ಘಕಾಲದ ಒಡನಾಟವನ್ನು ಸ್ಮರಿಸಿ ಅವರು ನಿಜವಾದ ಅರ್ಥದಲ್ಲಿ ಒಬ್ಬ ಗ್ರಂಥ ಸೇವಕರಾಗಿದ್ದರು ಮತ್ತು ನನ್ನ ಪತ್ರಿಕೋದ್ಯಮಕ್ಕೆ ಬೇಕಾದ ಗ್ರಂಥಗಳನ್ನು ಹುಡುಕಿ ನನಗೆ ಕೊಡುತ್ತಿದ್ದರು ಎಂದರು.
ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಮಾತನಾಡಿ ಗೋವಿಂದರಾಯರು ಇಂದಿನ ಸಮಾಜಕ್ಕೆ ಉನ್ನತವಾದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ಜ್ಞಾನಸತ್ರವನ್ನು ಅವರ ಮಕ್ಕಳು ಕ್ಷಮಾ ರಾವ್, ಶುಭದ್ ರಾವ್, ಡಾಕ್ಟರ್ ಶರದ್ ರಾವ್ ಅವರು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು. ಮಾಜಿ ಸಚಿವರು ಮತ್ತು ಪೂರ್ವ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಗೋವಿಂದರಾಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಛತ್ರಪತಿ ಫೌಂಡೇಶನ್ ಅಧ್ಯಕ್ಷರಾದ ಗಿರೀಶ್ ರಾವ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು.