
ಉಡುಪಿ : ಉಡುಪಿ ಜಿಲ್ಲೆ ಮರವಂತೆ ಸಮುದ್ರ ತೀರದಲ್ಲಿ ಭಾರೀ ದುರಂತವೊಂದು ಸಮಯ ಪ್ರಜ್ಞೆಯಿಂದ ತಪ್ಪಿದ ಘಟನೆ ನಡೆದಿದೆ. ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಮರವಂತೆ ಬೀಚ್ನಲ್ಲಿ ಪ್ರವಾಸಿಗರ ಸೆಲ್ಫಿ ಹುಚ್ಚಾಟ ಹಾಗೂ ಅಜಾಗ್ರತೆಯ ಪರಿಣಾಮವಾಗಿ ಐದು ಮಂದಿ ಸಮುದ್ರ ಪಾಲಾಗುವ ಹಂತಕ್ಕೆ ತಲುಪಿದ್ದರು. ಆದರೆ ಲೈಫ್ ಗಾರ್ಡ್ಗಳ ಸಮಯ ಪ್ರಜ್ಞೆ ಮತ್ತು ಸ್ಥಳೀಯರ ಸಹಕಾರದಿಂದ ಅವರನ್ನು ರಕ್ಷಿಸಲಾಯಿತು.
ಜಿಲ್ಲಾಡಳಿತ ಹಾಗೂ ಲೈಫ್ ಗಾರ್ಡ್ಗಳು ಮುಂಚಿತವಾಗಿಯೇ ಭದ್ರತಾ ಎಚ್ಚರಿಕೆ ನೀಡಿದ್ದರೂ, ಪ್ರವಾಸಿಗರು ಈ ಸೂಚನೆಗಳನ್ನು ಗಮನಿಸದೆ ಅಪಾಯದ ಪ್ರದೇಶದಲ್ಲಿ ನೀರಿಗೆ ಇಳಿದಿದ್ದರು. ಈ ವೇಳೆ ಸಮುದ್ರದ ರಕ್ಕಸ ಅಲೆಗಳ ರಭಸಕ್ಕೆ ಬೆಂಗಳೂರು ಮೂಲದ ನಾಲ್ವರು ಪುರುಷರು ಹಾಗೂ ಗೋವಾ ಮೂಲದ ಮಹಿಳೆಯೊಬ್ಬರು ಸಿಲುಕಿದ್ದರು.
ಘಟನೆಯ ತೀವ್ರತೆಯನ್ನು ಅರಿತು ತಕ್ಷಣ ಕಾರ್ಯಪ್ರವೃತ್ತರಾದ ಲೈಫ್ ಗಾರ್ಡ್ ಪೃಥ್ವಿರಾಜ್ ಉಪ್ಪುಂದ , ಪ್ರಮೋದ್ ರಾಜ್ ಉಪ್ಪುಂದ , ಬೀಚ್ ಉಸ್ತುವಾರಿ ಸುರೇಶ್ ಕೊಡೇರಿ ಹಾಗೂ ಇಬ್ರಾಹಿಂ ಗಂಗೊಳ್ಳಿಯವರು ಸ್ಥಳೀಯರೊಂದಿಗೆ ಸೇರಿ ಕಾರ್ಯಾಚರಣೆ ನಡೆಸಿ ಐವರನ್ನೂ ಸುರಕ್ಷಿತವಾಗಿ ಬೆಕ್ಗೆ ತಲುಪಿಸಿದರು.

ಉಡುಪಿಯ ಮಲ್ಪೆ ಬೀಚ್ಗೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಮರವಂತೆಯತ್ತ ವಾಲಿದ್ದಾರೆ. ಆದರೆ ಸುರಕ್ಷತೆ ನಿರ್ಲಕ್ಷಿಸಿ ನೀರಿಗೆ ಇಳಿಯುತ್ತಿರುವ ಪ್ರವೃತ್ತಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಅಜಾಗ್ರತೆಯ ಪ್ರವಾಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.
“ಬೀಚ್ಗಳಲ್ಲಿ ಸೌಂದರ್ಯವನ್ನು ಅನುಭವಿಸುವಾಗ ಸುರಕ್ಷತೆ ಎಂಬ ಅಂಶವನ್ನು ಮರೆಯಬಾರದು” ಎಂಬ ಸಂದೇಶವನ್ನು ಈ ಘಟನೆ ನೆನಪಿಸುತ್ತಿದೆ.