
ಅಹ್ಮದಾಬಾದ್ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದಲ್ಲಿ ಕರ್ತವ್ಯ ನಿರ್ಲಕ್ಷಿಸುವವರಿಗೆ ಕಠಿಣ ಸಂದೇಶ ನೀಡಿದ್ದಾರೆ . ಪಕ್ಷದ ಜವಾಬ್ದಾರಿ ನಿರ್ವಹಿಸದವರು ಸ್ವಯಂ ನಿವೃತ್ತಿ ಪಡೆಯಬೇಕು ಅಥವಾ ಪಕ್ಷದಿಂದ ದೂರ ಸರಬೇಕು ಎಂದು ಎಚ್ಚರಿಸಿದ್ದಾರೆ.
ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಖರ್ಗೆ, ಪಕ್ಷದ ಸಂಘಟನೆಯ ಬಲವರ್ಧನೆಗೆ ಜಿಲ್ಲಾಧ್ಯಕ್ಷರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರನ್ನು ಎಐಸಿಸಿಯ ಮಾರ್ಗಸೂಚಿಯಂತೆ ನಿಷ್ಪಕ್ಷಪಾತವಾಗಿ ಹಾಗೂ ಕಟ್ಟುನಿಟ್ಟಾಗಿ ಆಯ್ಕೆ ಮಾಡಬೇಕು ಎಂದರು.
ಜಿಲ್ಲಾಧ್ಯಕ್ಷರು ನೇಮಕವಾದ ಒಂದು ವರ್ಷದೊಳಗೆ ಬೂತ್, ಮಂಡಲ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಬೇಕು ಎಂದು ಖರ್ಗೆ ಸೂಚನೆ ನೀಡಿದ್ದು, ಭವಿಷ್ಯದ ಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿಯೂ ಜಿಲ್ಲಾಧ್ಯಕ್ಷರ ಪಾಲ್ಗೊಳ್ಳುವಿಕೆ ಇರಲಿದೆ ಎಂದು ತಿಳಿಸಿದರು.