


ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ದೊರೆತಿದೆ. ಸಂತ ಲಾರೆನ್ಸರ ಅದ್ಭುತ ಪ್ರತಿಮೆಯನ್ನು ಚರ್ಚ್ ಸುತ್ತಲೂ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಸಾರ್ವಜನಿಕ ವೀಕ್ಷಣೆಗಾಗಿ ವೇದಿಕೆಯ ಮೇಲೆ ಇಡುವ ಮೂಲಕ ಮಹೋತ್ಸವವು ಆರಂಭಗೊಂಡಿದೆ.
ವಂ. ಜಿತೇಶ್ ಕ್ಯಾಸ್ತೆಲಿನೊ ಭಾನುವಾರ ಮುಂಜಾನೆ 7:30 ಕ್ಕೆ ಮೊದಲ ಬಲಿಪೂಜೆಯನ್ನು ಅರ್ಪಿಸಿದರು. ನಂತರ, ಯಾತ್ರಿಕರ ಸುರಕ್ಷತೆಗಾಗಿ ಮತ್ತು ಎಲ್ಲಾ ಕಾರ್ಯ ಕ್ರಮಗಳ ಯಶಸ್ಸಿಗಾಗಿ ಭಗವಂತನ ಆಶೀರ್ವಾದಕ್ಕಾಗಿ ಆರಾಧನಾ ವಿಧಿಯನ್ನು ನೆರವೇರಿಸಿದರು. ಬಳಿಕ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರು ಹಬ್ಬದ ಧ್ವಜವನ್ನು ಹಾರಿಸಿದರು. ಪಾಲನ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ಸಂದೇಶ ನೀಡುವ ಮುಖೇನ ಹಬ್ಬ ಹರಿದಿನಗಳ ಆಚರಣೆಗಳಿಗೆ ಶುಭ ಹಾರೈಸಿದರು.
ಬೆಳಿಗ್ಗೆ 10:30 ಕ್ಕೆ ಪರಮಪೂಜ್ಯ, ಜೆರಾಲ್ಡ್ ಐಸಾಕ್ ಲೋಬೊ ಬಲಿಪೂಜೆಯನ್ನು ಅರ್ಪಿಸಿದರು. ಬಲಿದಾನದ ಕೊನೆಯಲ್ಲಿ ಕೈಯಲ್ಲಿ ಬರೆದ ಬೈಬಲ್, ಮಕ್ಕಳಿಗಾಗಿ ಸಂತರ ವುಸ್ತಕ ಮತ್ತು ವಂ. ಸ್ವಾಮಿ ಲೂಯಿಸ್ ಡೇಸಾ ಬರೆದ ಶಿಲುಬೆಯ ಮಾರ್ಗ ಪುಸ್ತಕವನ್ನು ಬಿಷಪ್ ಬಿಡುಗಡೆ ಮಾಡಿದರು. ಉಳಿದ ಪೂಜೆಗಳನ್ನು ಧರ್ಮಗುರು ಫಾದರ್ ಅನಿಲ್ ಕ್ರಾಸ್ತಾ, ಕ್ಯಾರಿತಾಸ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಫಾದರ್ ಪ್ರಕಾಶ್ ಲೋಬೊ, ಸೈಂಟ್ ಆನ್ಸ್ ಪೈರಿ, ಮಂಗಳೂರು, ಫಾದರ್ (ಡಾ) ಪ್ರವೀಣ್ ಜಾಯ್ ಸಲ್ಮಾನ್ಯಾ, ಸೈಂಟ್ ಜೋಸೆಫ್ ಸಮಿನರಿ, ಮಂಗಳೂರು, ಫಾದರ್ ಅವನ್ ಡಿಸೋಜ, ಸೈಂಟ್ ಜೋಸೆಫ್ ಸೆಮಿನರಿ, ಮಂಗಳೂರು, ಫಾದರ್ ವಾಲ್ಕರ್ ಡಿಸೋಜ ಮತ್ತು ಬೆಂದೂರು ಚರ್ಚಿನ ಧರ್ಮಗುರುಗಳು ಆಚರಿಸಿದರು.
ದೇವರ ವಾಕ್ಯದ ಭಾನುವಾರ ಆದುದರಿಂದ ಬೈಬಲನ್ನು ಧೂಪ ಮತ್ತು ಹಾರ ಹಾಕಿ ಗೌರವಿಸಲಾಯಿತು. “ಜುಬಿಲಿ 2025 ರ ವಿಷಯ ಭರವಸೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ” ಎಂಬುದರ ಬಗ್ಗೆ, ಬಲಿಪೂಜೆಯಲ್ಲಿ ಎಲ್ಲಾ ಗುರುಗಳು ಬಹಳ ಚಿಂತನಶೀಲ ಪ್ರವಚನಗಳನ್ನು ಬೋಧಿಸಿದರು. ಭಾನುವಾರ ಮತ್ತು ಭಾರತದ ಗಣರಾಜ್ಯೋತ್ಸವ ದಿನವಾದ್ದರಿಂದ ಬೆಳಗಿನ ಜಾವದಿಂದ ತಡರಾತ್ರಿ ತನಕ ಸಾವಿರಾರು ಜನರು ದೇವಾಲಯಕ್ಕೆ ಆಗಮಿಸಿದರು. ಇಪ್ಪತ್ತಕ್ಕೂ ಹೆಚ್ಚು ಗುರುಗಳು ಪಾಪಕ್ಷಮಾಪಣೆಯನ್ನು ಗೈದರು.
ಇದು ಜುಬಿಲಿ ವರ್ಷವಾಗಿದ್ದರಿಂದ ಮತ್ತು ಈ ದೇವಾಲಯವನ್ನು ವಿಶೇಷ ಆರ್ಶೀವಾದಗಳನ್ನು ಪಡೆಯುವ ಪವಿತ್ರ ಸ್ಮಾರಕವೆಂದು ಘೋಷಿಸಲಾಗಿರುವುದರಿಂದ, ಧರ್ಮ ಮತ್ತು ಜಾತಿಗಳನ್ನು ಲೆಕ್ಕಿಸದೆ ಭಕ್ತಾಧಿಗಳು ಬಸಿಲಿಕಾಕ್ಕೆ ಭೇಟಿ ನೀಡಿ ಸಂತ ಲಾರೆನ್ಸಾರಿಗೆ ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸಿದರು.
ಬಲಿಪೂಜೆಯಲ್ಲಿ ಎಲ್ಲಾ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕೊನೆಯ ಬಲಿಪೂಜೆಯನ್ನು ರಾತ್ರಿ 8 ಗಂಟೆಗೆ ನಡೆಸಲಾಯಿತು. ಸೋಮವಾರ, ಕೆಲಸದ ದಿನವಾದ್ದರಿಂದ ಕೇವಲ ಮೂರು ಬಲಿಪೂಜೆಗಳು ಮಾತ್ರ ಆಚರಿಸಲಾಗುತ್ತದೆ ಮತ್ತು ಈ ಬಲಿಪೂಜೆಗಳ ಸಮಯದಲ್ಲಿ ರೋಗಿಗಳು ಮತ್ತು ಬಳಲುತ್ತಿರುವವರ ಉದ್ದೇಶಗಳಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.