
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ‘ಥಟ್ ಅಂತ ಹೇಳಿ’ ಕ್ವಿಜ್ ಕಾಯಕ್ರಮ ಐದು ಸಾವಿರ ಸಂಚಿಕೆಯ ಸನಿಹದಲ್ಲಿದೆ. ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮ ಐದು ಸಾವಿರ ಸಂಚಿಕೆಗಳನ್ನು ಪೂರೈಸುತ್ತಿರುವ ದೇಶದ ವಾಹಿನಿಗಳ ಇತಿಹಾಸದಲ್ಲಿಯೇ ಮೊದಲ ಕಾರ್ಯಕ್ರಮ ಎನ್ನುವ ‘ದಾಖಲೆ’ ನಿರ್ಮಿಸಿದೆ.
ಈಗಾಗಲೇ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿರುವ ಈ ಕಾರ್ಯಕ್ರಮ ಇದೀಗ ಗಿನ್ನಿಸ್ ವಿಶ್ವದಾಖಲೆಯತ್ತ ದಾಪುಗಾಲಿಟ್ಟಿದೆ. 2002ರ ಜನವರಿ 4ರಂದು ಪ್ರಾರಂಭವಾದ ಥಟ್ ಅಂತಾ ಹೇಳಿ ಕಾರ್ಯಕ್ರಮ ಅ.13ರಂದು ಐದು ಸಾವಿರದ ಸಂಚಿಕೆಯ ಪ್ರಸಾರಕ್ಕೆ ಸಜ್ಜಾಗಿದೆ.
ಹೊಸ ಮೈಲಿಗಲ್ಲಿನ ಸಂಚಿಕೆಯನ್ನು 11ರಂದು ಜಿಕೆವಿಕೆ ಆವರಣದಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಕನ್ವೆನ್ಷನ್ ಕೇಂದ್ರದಲ್ಲಿ ಚಿತ್ರೀಕರಣವಾಗಲಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಥ್, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಡಾ.ನಾ.ಸೋಮೇಶ್ವರ ಅವರು ನಡೆಸಿಕೊಡುವ ಈ ಕಾರ್ಯಕ್ರಮದ ಉಸ್ತುವಾರಿ ಹಾಗೂ ನಿರ್ವಹಣೆ ಯ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಎಚ್.ಎನ್.ಆರತಿ, ಕಾರ್ಯಕ್ರಮ ನಿರ್ಮಾಪಕರಾದ ಎಂ.ಎನ್.ಚಂದ್ರಕಲಾ ಇದೀಗ 500ನೇ ಸಂಚಿಕೆಯ ಸಿದ್ಧತೆಯನ್ನು ತೊಡಗಿದ್ದಾರೆ. 23 ವರ್ಷಗಳ ಹಿಂದೆ ಉಷಾಕಿಣಿ ಅವರು ಈ ಕಾರ್ಯಕ್ರಮ ಆರಂಭಿಸಿದ್ದರು. 100ನೇ ಸಂಚಿಕೆಯಲ್ಲಿ ರಾಜ್ಯಸಭಾ ಸದಸ್ಯರಾದ ಸುಧಾಮೂರ್ತಿ ಅವರು ಪಾಲ್ಗೊಂಡಿದ್ದರು.
ಕೋವಿಡ್ನಲ್ಲಿ ಮಾತ್ರ ಸ್ಥಗಿತ: ಚಂದನ ವಾಹಿನಿಯಲ್ಲಿ ಕಳೆದ 13 ವರ್ಷಗಳಿಂದ ನಿರಂತರವಾಗಿ ಪ್ರಸಾರವಾಗುತ್ತಿರುವ ಥಟ್ ಅಂತ ಹೇಳಿ ಕಾರ್ಯಕ್ರಮ ಕೋವಿಡ್ ಸಮಯಲ್ಲಿ ಕೆಲ ಕಾಲ ಸ್ಥಗಿತಗೊಂಡಿತ್ತು. ಇದನ್ನು ಹೊರತುಪಡಿಸಿ, ಇನ್ಯಾವ ಸಮಯದಲ್ಲಿಯೂ ಸ್ಥಗಿತವಾಗಿರಲಿಲ್ಲ. ನಿತ್ಯ 30 ನಿಮಿಷಗಳ ಕಾಲ ನಡೆಯುವ ಈ ಕಾರ್ಯಕ್ರಮ ಈವರೆಗೆ 2500 ಗಂಟೆಗಳ ಕಾಲ ಪ್ರಸಾರ ವಾಗಿದ್ದು, ಈ ಅವಧಿಯಲ್ಲಿ 75 ಸಾವಿರ ಪ್ರಶ್ನೆಗಳನ್ನು ಕೇಳಿದ್ದು, 15 ಸಾವಿರ ಸ್ಪರ್ಧಿಗಳು ಭಾಗವಹಿಸಿ 70 ಸಾವಿರ ಕನ್ನಡದ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ. ವಿಶೇಷ ಸನ್ನಿವೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಈ ಕಾರ್ಯಕ್ರಮ ಮೂಡಿಬಂದಿದೆ.
ಕಾರಾಗೃಹ ವಾಸಿಗಳಿಗೆ ವಿಶೇಷ ಸ್ಪರ್ಧೆ, ಅಂಧರು, ಎಚ್ಐವಿ ಸೋಂಕಿತರು, ಐಟಿ ತಜ್ಞರು, ಅನಿವಾಸಿ ಭಾರತೀಯರು ಹೀಗೆ ಹತ್ತು ಹಲವು ವಿಭಾಗಗಳಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗಿದೆ. ಇದೀಗ ಈ ಕಾರ್ಯಕ್ರಮ ಮತ್ತೊಂದು ಹೆಗ್ಗುರುತು ಮೂಡಿಸಲು ಸರ್ವ ಸನ್ನದ್ಧವಾಗಿದೆ.



































