
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರಂಕೋಟೆ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಅಡಗುತಾಣವೊಂದನ್ನು ಪತ್ತೆಹಚ್ಚಿದ್ದು, ಐದು ಸುಧಾರಿತ ಸ್ಫೋಟಕ ಸಾಧನ(ಐಇಡಿ)ಗಳನ್ನು ವಶಕ್ಕೆ ಪಡೆದಿದ್ದಾರೆ.
ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಭಯಾನಕ ಉಗ್ರ ದಾಳಿಯಿಂದ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ ಬಳಿಕ, ರಾಜ್ಯಾದ್ಯಂತ ಭದ್ರತಾ ಪಡೆಗಳು ಭಯೋತ್ಪಾದಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ. ಇದರ ಭಾಗವಾಗಿ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಅಡಗುತಾಣ ಪತ್ತೆಯಾಗಿದ್ದು, ಟಿಫಿನ್ ಬಾಕ್ಸ್ ಮತ್ತು ಸ್ಟೀಲ್ ಬಕೆಟ್ಗಳಲ್ಲಿ ಮರೆಮಾಡಲಾಗಿದ್ದ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಥಳದಿಂದ ಸಂವಹನ ಸಾಧನಗಳು ಮತ್ತು ಇತರೆ ಅಪರಾಧ ಸಂಬಂಧಿತ ವಸ್ತುಗಳನ್ನೂ ವಶಪಡಿಸಿಕೊಂಡಿದ್ದಾರೆ. ಉಗ್ರರ ತಂಗುದಾಣಗಳನ್ನು ಧ್ವಂಸಗೊಳಿಸಲಾಗಿದ್ದು, ನೂರಾರು ಶಂಕಿತ ವ್ಯಕ್ತಿಗಳನ್ನು ವಿಚಾರಣೆಗಾಗಿ ಬಂಧಿಸಲಾಗಿದೆ.
ಈ ಘಟನೆಯ ನಂತರ ರಾಷ್ಟ್ರದ ಭದ್ರತೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗಂಭೀರವಾಗಿ ಪ್ರತಿಕ್ರಿಯಿಸಿದ್ದು, “ಪ್ರತೀಕಾರ ಖಚಿತ” ಎಂದಿದ್ದಾರೆ. ಪಹಲ್ಗಾಮ್ ಶೈಲಿಯ ದಾಳಿಗಳು ಪುನರಾವರ್ತನೆಗೊಳ್ಳದಂತೆ ಬೃಹತ್ ಕಾರ್ಯಾಚರಣೆಗಳು ನಡೆಯುತ್ತಿವೆ. ಜಮ್ಮುವಿನ ಜೈಲುಗಳಲ್ಲಿಯೂ ಭದ್ರತೆ ಕಟ್ಟುನಿಟ್ಟಾಗಿ ಗಟ್ಟಿಗೊಳಿಸಲಾಗಿದೆ.