
ಬೆಂಗಳೂರು : ಕಮಲ್ ಹಾಸನ್ ಅಭಿನಯದ ವಿವಾದಾತ್ಮಕ “ಥಗ್ ಲೈಫ್” (Thug Life) ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ಎಚ್ಚರಿಸಿ, ಚಿತ್ರದ ಬಿಡುಗಡೆಗೆ ಅವಕಾಶ ನೀಡಬೇಕೆಂದು ಸೂಚನೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ, “ಚಿತ್ರದ ಬಿಡುಗಡೆಗೆ ಯಾವುದೇ ತಡೆ ಇರುವುದಿಲ್ಲ. ಪ್ರೇಕ್ಷಕರು, ನಿರ್ಮಾಪಕರು ಮತ್ತು ವಿತರಕರಿಗೆ ಸರ್ಕಾರ ಭದ್ರತೆ ಒದಗಿಸಲಿದೆ,” ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ ದಿಟ್ಟ ಹೇಳಿಕೆ:
“ಚಿತ್ರಗಳನ್ನು ತಡೆದು ನಿಲ್ಲಿಸುವ ಹಕ್ಕು ಯಾರಿಗೂ ಇಲ್ಲ. ಯಾರಿಗಾದರೂ ಇಷ್ಟವಿಲ್ಲದಿದ್ದರೆ ಚಿತ್ರವನ್ನ ನೋಡಬೇಡಿ, ಆದರೆ ಬೆದರಿಕೆ ಅಥವಾ ನಿರ್ಬಂಧ ಸರಿಯಲ್ಲ,” ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ . ಚಿತ್ರಮಂದಿರಗಳಲ್ಲಿ ಏನು ಪ್ರದರ್ಶಿಸಬೇಕು ಎಂಬುದನ್ನು ಸಂಘಟನೆಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರದ ಸ್ಪಷ್ಟನೆ:
ರಾಜ್ಯ ಸರ್ಕಾರವು “ಥಗ್ ಲೈಫ್” ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕರಿಗೆ ಹಾಗೂ ಕಲಾವಿದರಿಗೆ ಅಗತ್ಯವಿರುವ ಭದ್ರತೆಯನ್ನು ಒದಗಿಸಲಾಗುವುದು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯವೆಂದು ವಿವರಿಸಿದೆ.
ಕನ್ನಡಪರ ಸಂಘಟನೆಗಳ ಎಚ್ಚರಿಕೆ:
ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಪ್ರವೀಣ್ ಶೆಟ್ಟಿ, ವಿಡಿಯೋ ಮೂಲಕ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದು, “ಸಿನಿಮಾ ಬಿಡುಗಡೆ ಆದರೆ, ನಾವು ಟಿಕೆಟ್ ಖರೀದಿ ಮಾಡಿ ಚಿತ್ರ ನೋಡಲು ಹೋಗುತ್ತೇವೆ,” ಎಂಬ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ಪ್ರತಿಭಟನೆ ಎಂಬ ತಾತ್ಪರ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಾಕ್ಸಾಫೀಸ್ ಸ್ಥಿತಿ ನಿರಾಶಾಜನಕ:
ಥಗ್ ಲೈಫ್ ಸಿನಿಮಾ ಬಿಡುಗಡೆ ಆಗಿ ಕೆಲ ವಾರಗಳೇ ಆಗಿದ್ದರೂ, ಸಿನಿಮಾ ಬಾಕ್ಸಾಫೀಸ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ವಿಮರ್ಶಕರಿಂದ ಕೂಡಾ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.