
ಮಂಗಳೂರು: ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ ಕೆ.ಟಿ. ಉಲ್ಲಾಸ್ ಅವರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಯ ನೇರ ಹಸ್ತಕ್ಷೇಪವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹತ್ಯೆ ಕೃತ್ಯಕ್ಕೆ ₹50 ಲಕ್ಷಕ್ಕೂ ಹೆಚ್ಚು ಹಣವನ್ನು ಹೂಡಲಾಗಿದೆ ಎಂದು ತಿಳಿಸಿದರು. “ಇದರ ಹಿಂದೆ ದೊಡ್ಡ ಶಕ್ತಿ ಕಾರ್ಯನಿರ್ವಹಿಸಿದೆ. ಪಿಎಫ್ಐ ಇಲ್ಲೂ ಟಾರ್ಗೆಟೆಡ್ ಕಿಲ್ಲಿಂಗ್ ಮಾಡಿದೆ ಎಂದರು.
ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ನೌಷಾದ್ ಈ ಕೃತ್ಯಕ್ಕೆ ಫಂಡಿಂಗ್ ಮಾಡಿದ್ದಾನೆ ಎಂದು ಉಲ್ಲಾಸ್ ಆರೋಪಿಸಿದರು. ಘಟನೆ ನಡೆದ ಸ್ಥಳದಲ್ಲೂ ಪಿಎಫ್ಐ ಕಾರ್ಯಕರ್ತರ ಉಪಸ್ಥಿತಿಯ ಬಗ್ಗೆ ಪಕ್ಕಾ ಮಾಹಿತಿ ಇದೆ ಎಂದ ಅವರು, ತನಿಖೆಯನ್ನು ಎನ್ಐಎಗೆ ನೀಡಬೇಕು ಎಂಬ ಆಗ್ರಹ ವ್ಯಕ್ತಪಡಿಸಿದರು.
ಇನ್ನು ಬಜಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಕೂಡಾ ಸುಹಾಸ್ ಶೆಟ್ಟಿಗೆ ಆಗಾಗ್ಗೆ ಕರೆ ಮಾಡಿ ತೊಂದರೆ ನೀಡುತ್ತಿದ್ದ ಆರೋಪವಿದೆ. ಹಾಗೆಯೇ ಕಳಸದ ರಂಜಿತ್ ಹಾಗೂ ನಾಗರಾಜ್ರನ್ನು ಸುಳ್ಳು ಹೇಳಿ ಈ ಪ್ರಕರಣದಲ್ಲಿ ಸೆಳೆದು ಕೃತ್ಯಕ್ಕೆ ಬಳಸಲಾಗಿದೆ ಎಂದರು.ಇವರಿಬ್ಬರು ಹಿಂದೂಗಳಾಗಿರುವುದರಿಂದ ಈ ಪ್ರಕರಣಕ್ಕೆ ಎನ್ ಐ ಎ ಆ್ಯಂಗಲ್ ಬರುವುದಿಲ್ಲ ಎಂದು ಈ ಉಪಾಯ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ , ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದ್ದರೂ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳ ನಿರೀಕ್ಷೆಯ ಮೇಲೆ ಶಂಕೆ ಇದೆ ಎಂದು ಕೆ.ಟಿ. ಉಲ್ಲಾಸ್ ಕಿಡಿಕಾರಿದರು.



































