
ಮೈಸೂರು : ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ದುರ್ಘಟನೆಯಲ್ಲಿ 11 ಮಂದಿ ದುರ್ಮರಣಕ್ಕೊಳಗಾಗಿದ್ದು, ಇನ್ನೂ 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂತಹ ದುರ್ಘಟನೆ ರಾಜ್ಯದಲ್ಲಿ ಮರುಕಳಿಸಬಾರದು ಎಂಬ ದೃಢ ನಿಲುವು ವ್ಯಕ್ತಪಡಿಸಿದ್ದಾರೆ. “ಈ ಘಟನೆ ನನಗೆ ಮತ್ತು ನನ್ನ ಸರ್ಕಾರಕ್ಕೆ ವೈಯಕ್ತಿಕವಾಗಿ ತೀವ್ರ ನೋವು ತಂದಿದೆ. ಯಾವುದೇ ಸರ್ಕಾರದ ಕಾಲದಲ್ಲೂ ಇಂತಹ ಘಟನೆ ಸಂಭವಿಸಬಾರದು,” ಎಂದು ಅವರು ತಿಳಿಸಿದ್ದಾರೆ.
ಸಿ ಎಂ ಸಿದ್ದರಾಮಯ್ಯನವರು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಭವಿಷ್ಯದಲ್ಲಿ ಸ್ಥಳಾಂತರಿಸುವ ಸಾಧ್ಯತೆಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು. ಕ್ರೀಡಾಂಗಣದ ಸ್ಥಳವನ್ನು ಹೆಚ್ಚು ಸುರಕ್ಷಿತ, ಯೋಜಿತ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದರು.
ಈ ಮಧ್ಯೆ, ಈ ದುರಂತದ ಕುರಿತು ವಿರೋಧ ಪಕ್ಷಗಳಾದ — ಬಿಜೆಪಿ ಹಾಗೂ ಜೆಡಿಎಸ್ — ಸರ್ಕಾರದ ಮೇಲೆ ರಾಜಕೀಯ ಪ್ರೇರಿತ ಟೀಕೆ ಮಾಡುತ್ತಿವೆ. ಸರ್ಕಾರ ಜನರ ಸುರಕ್ಷತೆಗೆ ಆದ್ಯತೆ ನೀಡಿದ್ದು, ಇಂತಹ ದುರಂತಗಳು ಮರುಕಳಿಸದಂತೆ ಸಮಗ್ರ ಪರಿಶೀಲನೆ ನಡೆಸಲಾಗುವುದು. ಭದ್ರತಾ ಕ್ರಮಗಳ ವಿಫಲತೆಗಳ ಬಗ್ಗೆ ತನಿಖೆ ನಡೆಯಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.