
ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್(ರಿ.) ಧರ್ಮಸ್ಥಳ ಇದರ ವತಿಯಿಂದ ಸೆ.14 ರಿಂದ ಸೆ.21ರ ವರೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ ಪೂರ್ವಭಾವಿ ಸಭೆಯು ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ-ಅಂಬಲಪಾಡಿ ಪ್ರಗತಿ ಸೌಧ ಸಭಾಂಗಣದಲ್ಲಿ ನಡೆಯಿತು.
ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಪೂರ್ವಭಾವಿ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸೆ.14ರಿಂದ ಸೆ.21ರ ವರೆಗೆ ಶ್ರೀ ಕ್ಷೇತ್ರದಲ್ಲಿ ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯಲಿರುವ 27ನೇ ಭಜನಾ ತರಬೇತಿ ಕಮ್ಮಟ, ಭಜನೋತ್ಸವ ಹಾಗೂ ಭಜನಾ ಮಂಡಳಿಗಳ ಸಾಧಕ ಪ್ರಶಸ್ತಿಯ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
ಭಜನಾ ತರಬೇತಿ ಕಮ್ಮಟದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸುವ ಉಡುಪಿ ತಾಲೂಕಿನ ಭಜನಾ ಮಂಡಳಿಗಳಿಗೆ ಆ.10ರೊಳಗೆ ಸಭೆ ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅವರು ಶ್ರೀ ಕ್ಷೇತ್ರದಿಂದ ಭಜನಾ ಸಂಸ್ಕಾರ ಬೆಳೆದು ಬಂದ ರೀತಿಯನ್ನು ವಿಶ್ಲೇಷಿಸಿ ಮಾತನಾಡಿ, ಡಾ! ಡಿ.ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಚಿಂತನೆಯ ಫಲವಾಗಿ ಶಿಕ್ಷಣದ ಜೊತೆಗೆ ಭಜನಾ ಸಂಸ್ಕಾರ, ಭಜನೆಯೊಂದಿಗೆ ವ್ಯಕ್ತಿತ್ವ ನಿರ್ಮಾಣದಂತಹ ಸತ್ಕಾರ್ಯ ನಡೆಯುತ್ತಿದೆ. ದಾಸ ವಾಣಿಯ ಸತ್ವಗಳ ಮೂಲಕ ಭಜನೆ ಇಂದು ಸಂಘಟನಾತ್ಮಕ ರೂಪ ತಳೆದು ಎಲ್ಲೆಡೆ ಪ್ರಚಲಿತವಾಗಿದೆ. ಎಲ್ಲರ ಸಂಘಟಿತ ಪ್ರಯತ್ನದ ಮೂಲಕ ಭಜನಾ ಪರಿಷತ್ ಪರಿಣಾಮಕಾರಿ ಭಜನಾ ಕ್ರಾಂತಿಗೆ ನಾಂದಿ ಹಾಡುವಂತಾಗಲಿ ಎಂದರು.
ಭಜನಾ ಪರಿಷತ್ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಪರಿಷತ್ತಿನ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ಮಾತನಾಡಿ, ಭಜನಾ ತರಬೇತಿ ಕಮ್ಮಟದಲ್ಲಿ ಭಾಗವಹಿಸಿದ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ವಲಯ ಮೇಲ್ವಿಚಾರಕರು, ಭಜನಾ ಪರಿಷತ್ ವಲಯ ಸಂಯೋಜಕರು, ಸಹ ಸಂಯೋಜಕರು ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.
ಯೋಜನೆಯ ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರೇಮಾ ಸ್ವಾಗತಿಸಿದರು. ಮಣಿಪಾಲ ವಲಯ ಮೇಲ್ವಿಚಾರಕ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.