
ದ್ವೀಪರಾಷ್ಟ್ರ ಶ್ರೀಲಂಕಾ ಇದೀಗ ಮತ್ತೊಂದು ಬಿಕ್ಕಟ್ಟಿಗೆ ಸಿಲುಕಿದೆ. ಈಗ ಉಪ್ಪಿನ ಕೊರತೆಯು ಜನಜೀವನವನ್ನು ಹೈರಾಣುಗೊಳಿಸುತ್ತಿದೆ. ಆರ್ಥಿಕ ದಿವಾಳಿಯಿಂದ ಬಳಲುತ್ತಿದ್ದ ಈ ರಾಷ್ಟ್ರವು ಈಗ ಅತೀ ಮೂಲಭೂತ ಆಹಾರ ಪದಾರ್ಥವಾದ ಉಪ್ಪಿಗೂ ಕೈಚಾಚುವ ಸ್ಥಿತಿಗೆ ತಲುಪಿದೆ.
ಸುತ್ತಲೂ ಸಮುದ್ರವಿದ್ದರೂ, ಉಪ್ಪಿಗೆ ಲಂಕಾದಲ್ಲಿ ಇತ್ತೀಚೆಗೆ ಭಾರೀ ಕೊರತೆ ಉಂಟಾಗಿದೆ. ಜನರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಉಪ್ಪು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ದುಸ್ಥಿತಿಯಲ್ಲಿ ಮಾನವೀಯ ನೆಲೆಯಲ್ಲಿ ಭಾರತ 3,050 ಟನ್ ಉಪ್ಪನ್ನು ಲಂಕಾಗೆ ರಫ್ತು ಮಾಡಿದೆ.
ಅಕಾಲಿಕ ಮಳೆಯೇ ಬಿಕ್ಕಟ್ಟಿಗೆ ಕಾರಣ
ಶ್ರೀಲಂಕಾದ ಉಪ್ಪು ಉತ್ಪಾದನೆ ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ಮತ್ತು ಅಕ್ಟೋಬರ್-ನವೆಂಬರ್ನಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಅಕಾಲಿಕ ಮಳೆಯು ಉಪ್ಪಿನ ತಯಾರಿಕೆಗೆ ಅಡ್ಡಿಯಾಗಿದ್ದು, ಈಗಾಗಲೇ ತಯಾರಾದ 15 ಟನ್ ಉಪ್ಪು ಮಳೆಗೆ ನಾಶವಾಗಿದೆ. ಸೂರ್ಯನ ಬೆಳಕು ಇಲ್ಲದಿರುವುದರಿಂದ ಉಪ್ಪು ತಯಾರಿಕೆಗೆ ಅಗತ್ಯವಾದ ಬಿಸಿಲೂ ದೊರೆಯುತ್ತಿಲ್ಲ.
ಈ ನಡುವೆ ಪುಟ್ಟಲಾಮ್, ಎಲಿಫೆಂಟ್ ಪಾಸ್, ಕುರುಂಚತೀವು ಮೊದಲಾದ ಪ್ರಮುಖ ಉಪ್ಪು ಘಟಕಗಳಲ್ಲಿ ಉತ್ಪಾದನೆ ಕುಂಠಿತಗೊಂಡಿದೆ. 1980ರ ದಶಕದಲ್ಲಿ ಎಲಿಫೆಂಟ್ ಪಾಸ್ನಲ್ಲಿ 85,000 ಟನ್ ಉಪ್ಪು ತಯಾರಿಸಲಾಗುತ್ತಿದ್ದರೂ, ಈಗ ಅದು ಕೇವಲ 20,000 ಟನ್ಗೆ ಇಳಿದಿದೆ. ಇಡೀ ದೇಶಕ್ಕೆ ವರ್ಷಕ್ಕೆ ಬೇಕಾಗುವ ಉಪ್ಪು 1,80,000 ಟನ್ ಇದ್ದರೆ, ಲಂಕಾ ಈಗ ಕೇವಲ ಶೇ.23ರಷ್ಟು ಉತ್ಪಾದನೆ ಮಾಡುತ್ತಿದೆ.

ಉಪ್ಪು ಬೆಲೆ ದುಪ್ಪಟ್ಟು!
ಬೇಡಿಕೆ ಹೆಚ್ಚಾಗಿ ಪೂರೈಕೆ ಕುಂದಿರುವ ಕಾರಣ, ಉಪ್ಪಿನ ದರ ಭಾರೀ ಏರಿಕೆಯಾಗಿದೆ. ಹಿಂದೆ 50 ಕೆ.ಜಿ ಉಪ್ಪು ಚೀಲ 420 ರೂ.ಗೆ ಸಿಗುತ್ತಿದ್ದರೆ, ಈಗ ಅದು 2,000 ರೂ. ತಲುಪಿದೆ. 1 ಕೆ.ಜಿ ಉಪ್ಪಿಗೆ 145 ರೂ. ನೀಡಬೇಕಾದ ಸ್ಥಿತಿ ಉಂಟಾಗಿದೆ. ಇತರ ದೇಶಗಳಿಂದ ಉಪ್ಪು ತರಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಭಾರತ ಮತ್ತೊಮ್ಮೆ ಸಹಾಯಕ್ಕೆ
ಶ್ರೀಲಂಕಾದ ಎಲ್ಲ ಸಂಕಷ್ಟಗಳಲ್ಲಿಯೂ ನೆರವಾಗುತ್ತಿರುವ ಭಾರತ, ಈಗಲೂ ಸಹಾಯ ಮಾಡಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳ ಮೂಲಕ 2,800 ಟನ್ ಉಪ್ಪು ಮತ್ತು ಖಾಸಗಿ ಸಂಸ್ಥೆಗಳಿಂದ 250 ಟನ್ ಉಪ್ಪು ಸೇರಿ ಒಟ್ಟು 3,050 ಟನ್ ಉಪ್ಪು ಲಂಕಾಕ್ಕೆ ರಫ್ತು ಮಾಡಲಾಗಿದೆ. ಲಂಕಾ ನಾಗರಿಕರು ಈ ಸಹಾಯಕ್ಕಾಗಿ ಭಾರತದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದಾರೆ.