
ಪಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಾರ್ಕಳ ಬೈಲೂರು ವಲಯದ ಪಳ್ಳಿ ಒಕ್ಕೂಟದ ವತಿಯಿಂದ ಪಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್ 26 ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಕಾರ್ಕಳ ತಾಲೂಕಿನ ಅಧ್ಯಕ್ಷರಾದ ಶ್ರೀ ಉದಯ್ ಕುಮಾರ್ ಹೆಗ್ಡೆಯವರು ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯಾದ ಶ್ರೀಯುತ ಗಣೇಶ ಆಚಾರ್ಯರವರು ಮಾತನಾಡುತ್ತಾ ಮಕ್ಕಳಿಗೆ ದುಷ್ಚಟದ ಬಗ್ಗೆ ಅರಿವು ಮೂಡಿಸಲು ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಕಾಯಿಲೆಯಿಂದ ಬಳಲುವ ಜನಸಂಖ್ಯೆಗಿಂತ ದುಶ್ಚಟಕ್ಕೆ ಬಲಿಯಾಗಿ ಮರಣಹೊಂದುವವರ ಸಂಖ್ಯೆ ಹೆಚ್ಚಾಗಿದೆ. ಆದುದರಿಂದ ಹದಿಹರೆಯದ ಮಕ್ಕಳು ನೀವು ನಿಮ್ಮ ಭವಿಷ್ಯವನ್ನು ದುಶ್ಚಟ ಮುಕ್ತ ಸಮಾಜ ಕಟ್ಟುವಲ್ಲಿ ಮುಡಿಪಾಗಿರುವಂತೆ ಮಾಹಿತಿಯನ್ನು ನೀಡುವುದರ ಜೊತೆಗೆ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಪಳ್ಳಿ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ಆಚಾರ್ಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡರು. ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀಯುತ ಮಂಜಪ್ಪ, ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ , ಎಸ್ ಡಿ ಎಮ್ ಸಿ ಅಧ್ಯಕ್ಷರಾದ ದಿನೇಶ್ ನಾಯ್ಕ್, ಶಾಂತರಾಮ್ ಶೆಟ್ಟಿ, ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಶ್ರೀಕಾಂತ್ ಪ್ರಭು, ಒಕ್ಕೂಟದ ಜೊತೆ ಕಾರ್ಯದರ್ಶಿ ನಿತಿನ್ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಪಳ್ಳಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಆಶಾರವರು ಸ್ವಾಗತಿಸಿ ವಲಯದ ಮೇಲ್ವಿಚಾರಕರಾದ ಯಶೋಧರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಜ್ಯೋತಿಯವರು ವಂದನಾರ್ಪಣೆ ಮಾಡಿದರು.



































